ಬೆಳಗಾವಿ: ವಿಧಾನಸಭಾ ಚುನಾವಣೆ ಎದುರಿಸಲು ಇಂದಿನಿಂದ ಕಾಂಗ್ರೆಸ್ ಮತ್ತೊಂದು ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಆರಂಭ.
ಇಂದು ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ವೀರಸೌಧದ ಬಳಿ ಬಸ್ ಯಾತ್ರೆಗೆ ಚಾಲನೆ ನೀಡಲಾಯ್ತು. ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಚಾಲನೆ ನೀಡಿದ್ದಾರೆ.
ಪ್ರಜಾಧ್ವನಿ ಬಸ್ ಯಾತ್ರೆ ಬೆಳಗಾವಿಯಿಂದ ಚಿಕ್ಕೋಡಿಗೆ ತೆರಳಲಿದ್ದು, ಇದರಲ್ಲಿ 40 ಹಿರಿಯ ಕಾಂಗ್ರೆಸ್ ನಾಯಕರು ಜೊತೆಯಾಗಿ ಪ್ರಯಾಣಿಸಲಿದ್ದಾರೆ. ಚಿಕ್ಕೋಡಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಸಮಾವೇಶದ ಬಳಿಕ ಬಸ್ ಮೂಲಕವೇ ಬೆಳಗಾವಿಗೆ ಎಲ್ಲಾ ನಾಯಕರು ಆಗಮಿಸಿ, ನಗರದಲ್ಲಿ ಆಯೋಜನೆ ಮಾಡಲಾಗಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಬೆಳಗಾವಿಯಿಂದಲೇ ಯಾಕೆ ಪ್ರಜಾಧ್ವನಿ ಬಸ್ ಯಾತ್ರೆ ಆರಂಭ? ಸ್ವಾತಂತ್ರ್ಯ ಪೂರ್ವದಲ್ಲಿ 1924 ಡಿಸೆಂಬರ್ 26, 27 ರಂದು ಎರಡು ದಿನಗಳ ಕಾಲ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಕಾಂಗ್ರೆಸ್ ನ 39 ನೇ ಅಧಿವೇಶನ ಬೆಳಗಾವಿ ನಗರದಲ್ಲಿ ನಡೆದಿತ್ತು. ಮಹಾತ್ಮಾ ಗಾಂಧಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದ ಅಧ್ಯಕ್ಷರಾಗಿದ್ದರು. ಹೀಗಾಗಿ ಕಾಂಗ್ರೆಸ್ ಬೆಳಗಾವಿಯ ವೀರಸೌಧ ಐತಿಹಾಸಿಕ ಸ್ಥಳವಾಗಿದೆ.
ಈ ಐತಿಹಾಸಿಕ ಸ್ಥಳದಿಂದ ಬಸ್ ಯಾತ್ರೆ ಜೊತೆಗೆ ರಾಜಕೀಯ ಲೆಕ್ಕಾಚಾರವೂ ಅಡಗಿದೆ. ಬೆಳಗಾವಿ18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬೆಂಗಳೂರು ಬಿಟ್ಟರೇ ಎರಡನೇ ದೊಡ್ಡ ಜಿಲ್ಲೆಯಾಗಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಪಾಪದ ಪುರಾಣ ಎಂಬ ಅಭಿಯಾನ ಶುರು ಮಾಡಲಾಗಿದೆ. ಸರ್ಕಾರ ವಿರುದ್ಧ ವ್ಯಾಪಕ ಪ್ರಚಾರ ಮಾಡಿದ್ರೆ, ಬೆಳಗಾವಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಮೇಲೂ ಪ್ರಭಾವ ಬೀರುತ್ತದೆ ಎಂಬುವುದು ಕಾಂಗ್ರೆಸ್ ಲೆಕ್ಕಾಚಾರ.
ಜ. 11 ರಿಂದ ಜ. 29ರ ವರೆಗೆ ಕಾಂಗ್ರೆಸ್ ಬಸ್ ಯಾತ್ರೆ ನಡೆಯಲಿದೆ. ಒಟ್ಟು 13 ದಿನ ಜಂಟಿ ಬಸ್ ಯಾತ್ರೆ ನಡೆಯಲಿದೆ.