ಬೆಂಗಳೂರಿನಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿದ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಪುಂಡರು ಸಂಗೊಳ್ಳಿರಾಯಣ್ಣ ಪುತ್ಥಳಿಯನ್ನು ಧ್ವಂಸಗೊಳಿಸಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದು, ಸಂಗೊಳ್ಳಿರಾಯಣ್ಣ ಪುತ್ಥಳಿಯನ್ನು ಕೆಡವಿದ್ದಾರೆ. 20ಕ್ಕೂ ಹೆಚ್ಚು ಸಾರ್ವಜನಿಕರ ವಾಹನ ಹಾಗೂ ಅಧಿವೇಶನದ ಕರ್ತವ್ಯಕ್ಕೆ ಬಂದಿರುವ 6 ಸರ್ಕಾರಿ ವಾಹನಗಳ ಮೇಲೂ ಕೂಡ ಕಲ್ಲು ತೂರಾಟ ನಡೆಸಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ.
ಪುಂಡರ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಲ್ಲಿಗಲ್ಲಿಗಳಲ್ಲಿ ಗುಂಪು ಗುಂಪಾಗಿ ನಿಂತು ಈ ಕೃತ್ಯ ವೆಸಗಿದ್ದಾರೆ ಎಂಬುದು ತಿಳಿದುಬಂದಿದೆ.
ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಪೊಲೀಸರು 27 ಜನರನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ 8 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಪುಂಡರ ಗಲಾಟೆಯನ್ನು ಖಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.