ಬೆಳಗಾವಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡುತ್ತಿರುವ ಕೋಳಿಮೊಟ್ಟೆ/ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ.ಅನುದಾನ ಲಭ್ಯತೆ ಆಧಾರದ ಮೇಲೆ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ಹಾಗೂ ಕಡ್ಲೆ ಮಿಠಾಯಿ ಎರಡೂ ನೀಡಲು ಸಹ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ
ಇನ್ನು ಯೋಜನೆಯಲ್ಲಿ ಸದ್ಯದಲ್ಲೇ ಹೊಸ ಆಯ್ಕೆಯಾಗಿ ಕೆಎಂಎಫ್ನ ಕಡ್ಲೆ ಮಿಠಾಯಿ ಕೂಡ ಸೇರಿಕೊಳ್ಳಲಿದೆ. ಅಂದರೆ ಬಾಳೆಹಣ್ಣು ಬೇಡವಾದರೆ ಮಕ್ಕಳು ಚಿಕ್ಕಿ ಸೇವಿಸಬಹುದಾಗಿದೆ.
ಇದೀಗ ಎಲ್ಲ ಅವಧಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬಾಳೆಹಣ್ಣು ಪೂರೈಕೆ ಸಾಧ್ಯವಾಗದಿರಬಹುದು ಎಂಬ ಕಾರಣಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆಯ್ಕೆ ನೀಡುವ ಸಲುವಾಗಿ ಬಾಳೆಹಣ್ಣಿಗೆ ಪರ್ಯಾಯವಾಗಿ ಕೆಎಂಎಫ್ನಿಂದ ತಯಾರಿಸಿದ ಕಡ್ಲೆ ಮಿಠಾಯಿ ನೀಡಲು ಸರ್ಕಾರ ಮುಂದಾಗಿದೆ. ಒಂದು ವೇಳೆ ಇರುವ ಅನುದಾನದಲ್ಲೆ? ಸಾಧ್ಯವಾಗುವುದಾದರೆ ಬಾಳೆಹಣ್ಣು ಮತ್ತು ಕಡ್ಲೆ ಮಿಠಾಯಿ ಎರಡನ್ನೂ ಕೊಡುವ ಆಲೋಚನೆಯೂ ಶಿಕ್ಷಣ ಇಲಾಖೆಗಿದೆ ಎಂದು ಮೂಲಗಳು ತಿಳಿಸಿವೆ.
ಬಹು ಪೌಷ್ಟಿಕಾಂಶ ಕೊರತೆ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಸರ್ಕಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್- ಮಧ್ಯಾಹ್ನದ ಉಪಾಹಾರ ಯೋಜನೆಯಲ್ಲಿ ಈಗಾಗಲೇ ಡಿಸೆಂಬರ್ ತಿಂಗಳಿಂದ ಕೋಳಿ ಮೊಟ್ಟೆನೀಡಲಾಗುತ್ತಿದೆ. ಕೋಳಿಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ನೀಡಲಾಗುತ್ತಿದೆ.