ಬೆಳಗಾವಿ: ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ಸಾರಾಯಿ ತರಲು ಕೊಟ್ಟಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ವೈಭವ ನಗರದ ಸತ್ಯ ಸಾಯಿ ಕಾಲೋನಿ ನಿವಾಸಿ ಮಹ್ಮದ್ ದಿಲಾಪುಕಾರ ಶೇಖ್ (27 ವ) ಎಂಬಾತ ಕೊಲೆಗೀಡಾಗಿದ್ದಾನೆ.ಇದೇ ಕಾಲೋನಿಯ ಉಸ್ಮಾನ ಲಾಲಸಾಬ ಶೇಖ್ ಎಂಬಾತನೇ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.
ಸತ್ಯಸಾಯಿ ಕಾಲೋನಿಯಲ್ಲಿ ಈ ಇಬ್ಬರೂ ನಿಂತುಕೊಂಡಿದ್ದರು. ಆಗ ಉಸ್ಮಾನ್ ಎಂಬಾತ ಮಹ್ಮದನಿಗೆ 500 ರೂ.ಹಣ ಕೊಟ್ಟು ಸಾರಾಯಿ ತೆಗದುಕೊಂಡು ಬರುವಂತೆ ಹೇಳಿದ್ದಾನೆ. ಆಗ ಮಹ್ಮದ್ 250 ರೂ.ಕೊಟ್ಟು ಸಾರಾಯಿ ತಂದಿದ್ದಾನೆ.
ಉಳಿದ 250 ರೂ. ಚಿಲ್ಲರೆ ಹಣವನ್ನು ಉಸ್ಮಾನನಿಗೆ ಹಿಂದಿರುಗಿಸಿಲ್ಲ. ಆಗ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳವಾಗಿದೆ. ಬಿಯರ್ ಬಾಟಲಿಯಿಂದ ಮಹ್ಮದನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.