ಬೆಳಗಾವಿ: ನಗರದಲ್ಲಿ ಗಾಂಜಾ ವ್ಯಸನಿಗಳ ಅಟ್ಟಹಾಸ ಮುಂದುವರೆದಿದ್ದು, ನಿನ್ನೆ ರಾತ್ರಿ ಗಾಂಜಾ(Drug) ವ್ಯಸನಿಗಳ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದೆ. ಈ ಘಟನೆ ಬೆಳಗಾವಿಯ ಹಳೇ ಪಿ.ಬಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೃತರನ್ನು ಲಗಾ ಗ್ರಾಮದ ವಿಜಯನಗರ ನಿವಾಸಿ ಮಹೇಶ್ ಕಾಮಣ್ಣಾಜೆ (35) ಎಂದು ಗುರುತಿಸಲಾಗಿದೆ.
ಬೈಕ್ ಅನ್ನು ಓವರ್ ಟೇಕ್ ಮಾಡಿದ ಎಂಬ ಒಂದೇ ಒಂದು ಕಾರಣಕ್ಕೆ 6 ಜನರಿದ್ದ ದುಷ್ಕರ್ಮಿಗಳ ತಂಡವೊಂದು ಗಾಂಜಾ ಸೇವಿಸಿ ನಿನ್ನೆ ರಾತ್ರಿ ಮಹೇಶ್ ಅವರ ಕಾರು ಕೀ ಕಿತ್ತುಕೊಂಡ ಜಗಳಕ್ಕೆ ನಿಂತರು. ಇದೇ ವೇಳೆ ಮಹೇಶ್ ಅವರ ತಂದೆ ಮತ್ತು ತಾಯಿ ಆಸ್ಪತ್ರೆಗೆಂದು ಹೋಗುತ್ತಿದ್ದಾಗ ಮಗನ ಜೊತೆ ನಡೆಯುತ್ತಿದ್ದ ಜಗಳ ಕಂಡು ಬಿಡಿಸಲು ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಕೂಡಲೇ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಮಹೇಶ್ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಶಹಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.