ಬೆಳಗಾವಿ : ಕಾಂಗ್ರೆಸ್ ನಲ್ಲಿ ಬದಲಾವಣೆಗೆ ಹಾಗೂ ಹೆಚ್ಚು ಸಂಘಟಿತಗೊಳಿಸಲು ಈ ಪಂಚರಾಜ್ಯಗಳ ಚುನಾವಣೆ ಒಂದು ಪಾಠವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲೆಡೆ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ಅದು ಅವರು ಕಾಣುತ್ತಿರುವ ಹಗಲು ಕನಸು. ಎಂದೆಂದಿಗೂ ಕಾಂಗ್ರೆಸ್ ಮುಕ್ತ ಮಾಡಲು ಅವರಿಂದ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಗೋವಾದಲ್ಲಿ ಮತಗಳು ವಿಭಜನೆಯಾಗಿದ್ದರಿಂದ ನಮ್ಮ ಪಕ್ಷಕ್ಕೆ ತೊಂದರೆಯಾಗಿದೆ ವಿನಃ ಯಾವ ದೊಡ್ಡ ಮಟ್ಟದಲ್ಲಿ ನಾವೇನು ಸೋತಿಲ್ಲ ಎಂದರು.
ಗೋವಾದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಮತಗಳು ವಿಭಜನೆಯಾಗಿದ್ದರಿಂದ ನಾವು ಸೋತಿದ್ದೇವೆ. ಗೋವಾದಲ್ಲಿ ನಮ್ಮ ವೋಟ್ ಬ್ಯಾಂಕ್ ಶೇ 32ರಷ್ಟಿದ್ದು, ಅದರಲ್ಲಿ ಕೇವಲ ಶೇ. 2ರಷ್ಟು ಮಾತ್ರ ಕಡಿಮೆಯಾಗಿದೆ. ಹೊರತು ಅಷ್ಟು ದೊಡ್ಡಮಟ್ಟದಲ್ಲಿ ಮತ ಕಳೆದುಕೊಂಡಿಲ್ಲ.ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಅಧಿಕಾರ ತರಲು ಶ್ರಮಿಸಲಾಗುವುದು ಎಂದರು.
ಕರ್ನಾಟಕದಲ್ಲಿ ನಾವು ಪಕ್ಷದ ಆಧಾರದ ಮೇಲೆ ಚುನಾವಣೆ ಮಾಡಲಾಗುತ್ತದೆ ಹೊರತು ನಾಯಕತ್ವದ ಮೇಲಲ್ಲ, ನಮ್ಮದು ಪಕ್ಷಾಧಾರಿತ. ಬೇರೆ ರಾಜ್ಯಗಳ ಫಲಿತಾಂಶ ನಮ್ಮ ರಾಜ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಡಿಫಿರೆಂಟ್ ಚುನಾವಣೆ ನಡೆಯುತ್ತದೆ ಎಂದರು.
ಬಿಜೆಪಿಯವರು ಒಮ್ಮೆಲೇ ಮೇಲೆ ಬಂದಿಲ್ಲ. ಅವರು ಸಹ 100 ವರ್ಷಗಳ ಕಾಲ ಹಂತ ಹಂತವಾಗಿ ಕಳೆದ ನಂತರ ಅಧಿಕಾರಕ್ಕೆ ಬಂದಿದ್ದಾರೆ. ನಮಗೆ ಈಗ ಸೋಲಾಗಿರಬಹುದು. ಮತ್ತೆ ನಾವು ಕೂಡಾ ಹಂತ ಹಂತವಾಗಿ ಜನರ ವಿಶ್ವಾಸ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಬಿಜೆಪಿ ದೇಶದಲ್ಲಿರುವ ಜನರಿಗೆ ಸುಳ್ಳುಗಳನ್ನು ಹೇಳುತ್ತಾ ಅಧಿಕಾರಿಕ್ಕೆ ಬಂದಿದ್ದಾರೆ. ಆದರೆ ನಮ್ಮ ಪಕ್ಷ ಸತ್ಯ ಹೇಳಿ ಬರುವ ಚುನಾವಣೆಗಳಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಲಾಗುವುದು ಎಂದರು. ಈ ವೇಳೆ ಮಾಜಿ ಸಚಿವ ಸುದರ್ಶನ್ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹಾಜರಿದ್ದರು.