ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಜನರಿಗೆ ಭರವಸೆ ನೀಡಿದರು.
ಬಸವರಾಜ ಬೊಮ್ಮಾಯಿಯವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ, ನೇಮಕಗೊಂಡ ಮುಖ್ಯಮಂತ್ರಿ, ಅಲ್ಲಿ ದುಡ್ಡು ಕೊಟ್ಟು ಬಿಟ್ಟು ಬಂದು ಇಲ್ಲಿ ಮುಖ್ಯಮಂತ್ರಿ ಆಗಿದ್ದಾರೆ, ಹೀಗಾಗಿ ರಾಜ್ಯದ ಜನತೆಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತಿಲ್ಲ ಎಂದರು.
ಆರ್ ಎಸ್ಎಸ್ ನವರು ಮುಖ್ಯಮಂತ್ರಿ ಮಾಡಿದ್ದಾರೆ, ಬೊಮ್ಮಾಯಿಯವರು ಅವರನ್ನು ಕೇಳಿಕೊಂಡು ಕೂತಿದ್ದಾರೆ. ಕಳೆದ 4 ವರ್ಷದ ಬಿಜೆಪಿ ಆಡಳಿತ ಬಡವರಿಗೆ ಒಂದು ಮನೆ ಕೊಟ್ಟಿಲ್ಲ, ನಾನು 5 ವರ್ಷ ಮುಖ್ಯಮಂತ್ರಿಯಾಗಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ ಎಂದರು.’
2023ರಲ್ಲಿ ಮತ್ತೆ ಕಾಂಗ್ರೆಸ್ ಗೆ ಅಧಿಕಾರ ಕೊಡಿ, ನೇಕಾರರು, ಹೊಸ ಮನೆಗಳು, ಹೊಸ ಊರುಗಳನ್ನು ಕಟ್ಟಿಸಿಕೊಡೋಣ, ಗ್ರಾಮವನ್ನು ಪ್ರವಾಹಕ್ಕೆ ತುತ್ತಾಗದಂತೆ ಮಾಡಿಕೊಡುತ್ತೇವೆ, ಕಾಂಗ್ರೆಸ್ ನ್ನು ಅಧಿಕಾರಕ್ಕೆ ತನ್ನಿ, ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಕಾಂಗ್ರೆಸ್ ಗೆ ಅವಕಾಶ ಕೊಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರ ಪರವಾದ ಸರ್ಕಾರವಾಗುತ್ತದೆ ಎಂದರು.
4 ಕೋಟಿ 30 ಲಕ್ಷ ಜನರಿಗೆ ನನ್ನ ಅಧಿಕಾರಾವಧಿಯಲ್ಲಿ ಅನ್ನಭಾಗ್ಯದಿಂದ ಪ್ರಯೋಜನವಾಗಿದೆ, ಕೋವಿಡ್ ಸಮಯದಲ್ಲಿ ಅನ್ನಭಾಗ್ಯದಿಂದ ಜನರಿಗೆ ಬಹಳ ಉಪಯೋಗವಾಗಿದೆ. ನಾನು ಅಧಿಕಾರಕ್ಕೆ ಬರುವುದು ಮುಖ್ಯ ಅಲ್ಲ, ರಾಜ್ಯ ಉಳಿಸಲು ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು ಎಂದರು.
ಬಿಜೆಪಿ ಮುಖ್ಯಮಂತ್ರಿಗಳು ಒಂದು ರೂಪಾಯಿ ಮನ್ನ ಮಾಡಿರಲಿಲ್ಲ, ನಾನು 5 ವರ್ಷದಲ್ಲಿ ನೇಕಾರರು, ರೈತರ ಸಾಲ ಮನ್ನಾ ಮಾಡಿದ್ದೆ ಎಂದು ಜನರ ಮುಂದೆ ಸಿದ್ದರಾಮಯ್ಯ ಸಾರಿದ್ದರು.