ಬಾಗಲಕೋಟೆ: ಜಿಲ್ಲೆಯ ಬನಹಟ್ಟಿಯಲ್ಲಿ ಬನಹಟ್ಟಿಯ ವಿಶ್ವಕರ್ಮ ಸಮಾಜದ ವತಿಯಿಂದ ಡಿ.2ರ ಶುಕ್ರವಾರ ವಿಶ್ವಕರ್ಮ ಮಹೋತ್ಸವ ಆಚರಿಸಲಾಯಿತು.
ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಬನಹಟ್ಟಿಯ ಲಕ್ಷ್ಮೀನಗರದ ಲಕ್ಷ್ಮಿ ದೇವಸ್ಥಾನದ ಬಳಿಯ ಬೆಟ್ಟದ ಮೇಲಿರುವ ವಿಶ್ವಕರ್ಮ ದೇವಸ್ಥಾನದಿಂದ ಹೊರಟು ಸಕಲ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ್ತೆ ದೇವಸ್ಥಾನದ ಆವರಣಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಗಾಯತ್ರಿ ಮಹಿಳಾ ಮಂಡಳದ ಮಹಿಳೆಯರು ಕುಂಭ, ಆರತಿ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರದ ಪ್ರಮುಖ ಸ್ಥಳಗಳಲ್ಲಿ ಕರಡಿ ಮತ್ತು ಸಂಬಾಳ ವಾದನ ಮತ್ತು ಪುರವಂತರು ವೀರಗಾಸೆ ಕಲೆಯನ್ನು ಪ್ರದರ್ಶಿಸಿದರು.