ಬೆಳಗಾವಿ: ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಸಮೀಪದ ಬೆನಕನಹೊಳಿ ಬಳಿ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಬೆನಕನಹೊಳಿಯ ಲಕ್ಷ್ಮಣ ರಾಮ ಅಂಬಲಿ (45) ಹಾಗೂ ಅವರ ಮಕ್ಕಳಾದ ರಮೇಶ್‌ (15), ಯಲ್ಲಪ್ಪ (13) ಎಂದು ಗುರುತಿಸಲಾಗಿದೆ. ಲಕ್ಷ್ಮಣ ಹಾಗೂ ಅವರ ಮಕ್ಕಳು ಘಟಪ್ರಭಾ ನದಿ ಸೇತುವೆ ಮೇಲೆ ಭಾನುವಾರ ಸಂಜೆ ಬೈಕ್‌ ನಿಲ್ಲಿಸಿ ಮೀನು ಹಿಡಿಯಲು ಹೋಗಿದ್ದರು ಎಂದು ತಿಳಿದುಬಂದಿದೆ.

ಭಾನುವಾರ ಹೋದವರು ಸೋಮವಾರ ಬೆಳಗ್ಗೆಯಾದರೂ ವಾಪಸ್‌ ಬಂದಿಲ್ಲ ಎಂದು ಆತಂಕಗೊಂಡ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನದಿ ಸೇತುವೆ ಮೇಲೆ ಬೈಕ್‌ ಪತ್ತೆಯಾಗಿದ್ದು, ಮೂವರು ನೀರುಪಾಲಗಿರುವುದು ತಿಳಿದುಬಂದಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್‌ ತಂಡದವರು ಆಗಮಿಸಿ ನದಿಯಲ್ಲಿ ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.