ಸವದತ್ತಿ : ಪ್ರೀತಿಯ ಬಲೆಗೆ ಬಿದ್ದ ಸಿಆರ್ಪಿಎಫ್ ಯೋಧನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇ ಉಳ್ಳಿಗೇರಿ ಗ್ರಾಮದಲ್ಲಿ ಸಂಭವಿಸಿದೆ.
ಸವದತ್ತಿ ಪಟ್ಟಣದ ಪದಕಿ ಓಣಿಯ ನಿವಾಸಿ ಹಾಗೂ ಸಿಆರ್ಪಿಎಫ್ ಯೋಧ ಶ್ರೀಶೈಲ್ಸೊಗಲದ (31) ಎಂಬಾತ ಮೃತ ಯೋಧ. ಈತ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡದಿದ್ದಾಗ ಹಾಗೂ ಯುವತಿಯು ಮದುವೆ ಮಾಡಿಕೊಳ್ಳಲು ಹಠ ಹಿಡಿದಾಗ ಮಾನಸಿಕ ಸಂದಿಗ್ಧ ಸ್ಥಿತಿಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ಇಬ್ಬರು ಸೇರಿ ಸೆ. 7ರಂದು ಸವದತ್ತಿ ಸಬ್ರಜಿಸ್ಟರ್ ಕಚೇರಿಗೆ ಮದುವೆ ಮಾಡಿಕೊಳ್ಳಲು ಹೋಗಿದ್ದಾರೆ. ಆದರೆ ಆ ದಿವಸ ಮದುವೆ ಆಗದೆ ಇರುವದರಿಂದ ಸೆ. 8ರಂದು ಧಾರವಾಡಕ್ಕೆ ತೆರಳಿದ್ದಾರೆ. ನಂತರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಶ್ರೀಶೈಲ್ ಮನೆಗೆ ಬಾರದೆ ಹಿರೇ ಉಳ್ಳಿಗೇರಿ ಗ್ರಾಮದ ವ್ಯಾಪ್ತಿಯ ಜಮೀನಿನೊಂದರಲ್ಲಿ ಡೆತ್ನೋಟ್ ಬರೆದಿಟ್ಟು ತನ್ನಷ್ಟಕ್ಕೆ ತಾನೆ ವಿಷ ಸೇವನೆ ಮಾಡಿಕೊಂಡಿದ್ದಾನೆ. ಈತನ ಸಾವಿನಲ್ಲಿ ಯುವತಿಯ ಮೇಲಾಗಲಿ ಹಾಗೂ ಬೇರೆ ಯಾರ ಮೇಲೂ ಯಾವುದೇ ಸಂಶಯ ಇಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.