ಬೆಳಗಾವಿ: ಗೋಕಾಕ ತಾಲ್ಲೂಕಿನ ಮಕ್ಕಳಗೇರಿ ಗ್ರಾಮದ ರೈತ ಲಕ್ಷ್ಮಣ ಬೀರಪ್ಪ ಈಳಿಗೇರ (34) ಎಂಬುವರು ಸಾಲಗಾರರ ಕಾಟ ತಾಳಲಾರದೆ ಫೇಸ್ಬುಕ್ ಲೈವ್ ಮಾಡುತ್ತಲೇ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘₹ 1.25 ಲಕ್ಷ ಸಾಲ ಕಟ್ಟಿದ್ದೆ. ₹ 3.5 ಲಕ್ಷ ಸಾಲವನ್ನು ಬಡ್ಡಿ ಸಮೇತ ಮಾರುಪಾವತಿಸಲು ಆಗಿರಲಿಲ್ಲ. ಹೀಗಾಗಿ, ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ಅರುಣ ಪವಾರ, ಅಶೋಕ ಅಂಕಲಗಿ ಮತ್ತು ಯಲ್ಲಪ್ಪ ಗಸ್ತಿ ಎನ್ನುವವರು ಕಾರಣ ಎಂದು ಆರೋಪಿಸಿದ್ದಾರೆ. ನನಗೆ ಕಿರುಕುಳ ನೀಡಿದ್ದಾರೆ’ ಎಂದು ದೂರಿದ್ದಾರೆ.