ಬೆಂಗಳೂರು: 6ರಿಂದ 12ನೇ ತರಗತಿಯವರೆಗೆ ಶಾಲೆಗಳು ನಡೆಸಿದ ಅನುಭವಗಳ ಆಧಾರದ ಮೇಲೆ 1ನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ನಿರ್ಧಾರ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಹಳ್ಳಿಗಳಲ್ಲಿ ಶೂನ್ಯ ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದು ಅಂತಹ ಕಡೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವಂತೆ ಸಾರ್ವಜನಿಕರು, ಶಿಕ್ಷಕರು, ಪೋಷಕರು ಬೇಡಿಕೆಯಿಟ್ಟ ಕಾರಣ ಇಂದು 6ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದಿದ್ದಾರೆ.
ಇಂದಿನಿಂದ ಮೂರು ದಿನ ಶಾಲೆಗಳನ್ನು ನಡೆಸಿದ ನಂತರ ಮತ್ತೆ ಮೂರು ದಿನ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಜೆ ಸಿಗುತ್ತಿದೆ, ಆಗ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಂದ ನಮಗೆ ಅಭಿಪ್ರಾಯಗಳು ಸಿಗುತ್ತವೆ. ಅವೆಲ್ಲವನ್ನೂ ತೆಗೆದುಕೊಂಡು ಮುಂದಿನ ಸೋಮವಾರದಿಂದ ಮುಂದಿನ ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಶಾಲೆಗಳ ಪುನರಾರಂಭಕ್ಕೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಶಿಕ್ಷಣ ಅಧಿಕಾರಿಗಳು, ಗ್ರಾಮ ಪಂಚಾಯತಿಯಿಂದ ಹಿಡಿದು ಮಹಾನಗರವರೆಗೆ ನಮಗೆ ಸಹಕಾರ ಸಿಕ್ಕಿದೆ. ಇದುವರೆಗೆ ರಾಜ್ಯದಲ್ಲಿ ಶೇಕಡಾ 98ಕ್ಕಿಂತ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಿರುವುದರಿಂದ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಚೆನ್ನಾಗಿ ಹೋಗಿ ಮುಂದಿನ ದಿನಗಳಲ್ಲಿ ತರಗತಿಗಳನ್ನು ಸರಾಗವಾಗಿ ನಡೆಸಿಕೊಂಡು ಹೋಗಬಹುದು ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.