ರಾಮನಗರ: ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮುಂದಿನ ವಾರ ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರುಗಳನ್ನು ಹರಾಜು ಹಾಕುವುದಾಗಿ, ಯಾರು ಬೇಕಾದರೂ ಹರಾಜು ಬಿಡ್ ಕೂಗಬಹುದು ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯ ಸಂಸದರ ಬಗ್ಗೆ ಟೀಕಾ ಪ್ರಹಾರ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಉತ್ತರ ಭಾಗದ ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಆದರೆ ರಾಜ್ಯದ ಸಂಸದರು ಎಲ್ಲಿದ್ದಾರೋ ಗೊತ್ತಿಲ್ಲ. ಆದ್ದರಿಂದ ಪ್ರಧಾನ ಮಂತ್ರಿಗಳೇ ಖುದ್ದಾಗಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಶಿಕ್ಷಕರ ಮತ್ತು ಉಪನ್ಯಾಸಕರ ಸಮಸ್ಯೆ ಕಣ್ಣೀರಿನ ಕಥೆಯಾಗಿದೆ. ಆದರೆ ಇವರ ಸಮಸ್ಯೆಗಳನ್ನು ಆಲಿಸುವವರು ಇಲ್ಲವೇ ಇಲ್ಲ. ಇದೇ ನವೆಂಬರ್ 1 ರಿಂದ ಮುಂದಿನ ನವೆಂಬರ್ 1ರವರೆಗೆ ಶಿಕ್ಷಕರ, ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು. ಶಿಕ್ಷಕರು ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ಮಹಿಳಾ ಶಿಕ್ಷಕರನ್ನು ಬೋಧನೆಗೆ ಮಾತ್ರ ಬಳಸಿಕೊಳ್ಳಬೇಕು, ಸರ್ಕಾರದ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬಾರದು, ಮಹಿಳಾ ಶಿಕ್ಷಕರಿಗೆ ರಕ್ಷಣೆ ಒದಗಿಸಬೇಕು. ಸರ್ಕಾರ ಮಹಿಳಾ ಶಿಕ್ಷಕರಿಗಾಗಿ ಸಹಾಯವಾಣಿಯನ್ನು ತೆರೆಯಬೇಕು ಎಂದು ವಾಟಾಳ್ ಒತ್ತಾಯಿಸಿದರು.
ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರಿಗೂ ಪಿಂಚಣಿ ಸೌಲಭ್ಯ ವಿಸ್ತರಿಸಬೇಕು, ಪ್ರೌಢಶಾಲಾ ಮತ್ತು ಪಿಯೂ ಉಪನ್ಯಾಸಕರ ಬಡ್ತಿ ವಿಚಾರವನ್ನು ಪರಿಹರಿಸಬೇಕು. ಗುತ್ತಿಗೆ ಉಪನ್ಯಾಸಕರಿಗೆ ನೇಮಕಾತಿ ಆದೇಶ ಹೊರಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ವರ್ಷ ಪೂರ್ತಿ ಬೀದರ್ನಿಂದ ಚಾಮರಾಜನಗರದವರೆಗೆ, ಮಂಗಳೂರಿನಿಂದ ಕೋಲಾರದವರೆಗೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮು, ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿಬಾಯಿ ಮುಂತಾದವರು ಭಾಗವಹಿಸಿದ್ದರು.