ಮಡಿಕೇರಿ: ಜಿಲ್ಲೆಯಲ್ಲಿ ನಡೆಯುವ ಕೈಲುಮುಹೂರ್ತ, ಗಣೇಶ ಚತುರ್ಥಿ ಹಾಗೂ ಬಕ್ರೀದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವ ಮೂಲಕ ಶಾಂತಿಯನ್ನು ಕಾಪಾಡಲು ಸರ್ವರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.
ಸೆ.3 ರಂದು ಕೈಲುಮೂರ್ತ, ಸೆ.4 ಮತ್ತು 5 ರಂದು ಗೌರಿ ಗಣೇಶ ಹಬ್ಬದ ಆಚರಣೆ, ನಂತರದ ದಿನಗಳಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಸೆ. 12 ರಂದು ಬಕ್ರೀದ್ ಹಬ್ಬ ಆಚರಣೆ ಇದೆ. ಈ ಸಂಬಂದ ಎಲ್ಲಾ ಗಣಪತಿ ಸಮಿತಿಯವರ ಮತ್ತು ವಿವಿಧ ಕೋಮಿನ ಮುಖಂಡರ ಸಭೆ ನಡೆಸಿ ಚರ್ಚಿಸಲಾಗಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.
ಕೈಲು ಮೂರ್ತ, ಗೌರಿ-ಗಣೇಶ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಂಟಿಂಗ್ಸ್ ಮತ್ತು ಬ್ಯಾನರ್ ಗಳನ್ನು ಕಟ್ಟುವ ಬಗ್ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣೇಶ ಮೂರ್ತಿಳ ಪ್ರತಿಷ್ಠ್ಟಾಪನೆಯ ಬಗ್ಗೆ ನಗರಸಭೆ/ ಸಂಬಂಧಪಟ್ಟ ಪಂಚಾಯತಿಗಳಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಪ್ರತಿಷ್ಠಾಪನಾ ಸ್ಥಳ, ಪ್ರತಿಷ್ಠಾಪನೆ ಸಮಯ, ಸಮಿತಿಯ ಸಂಪೂರ್ಣ ವಿವರ, ಈ ಪ್ರತಿಷ್ಠಾಪನಾ ಸ್ಥಳಕ್ಕೆ ಸಂಬಂಧಿಸಿದವರಿಂದ ನಿರಾಪೇಕ್ಷಣಾ ಪತ್ರ, ವಿದ್ಯುತ್ಚಕ್ತಿ ಇಲಾಖೆಯವರಿಂದ ಹಾಗೂ ಧ್ವನಿವರ್ಧಕ ಬಳಸಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ಪಡೆದ ಅನುಮತಿ ಪತ್ರ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ವಿವರವಾದ ಮಾಹಿತಿ ಸಾಕಷ್ಟು ಮುಂಚಿತವಾಗಿ ಸಂಬಂಧಿಸಿದ ಠಾಣೆಗೆ ನೀಡಬೇಕು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸ್ವಯಂ ಸೇವಕರು ಅಥವಾ ಸದಸ್ಯರ ಸಹಾಯವನ್ನು ಪಡೆದು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಂತೆ ನಡೆದುಕೊಳ್ಳುವುದು, ಗಣಪತಿ ಪ್ರತಿಷ್ಟಾಪನೆಯ ಸ್ಥಳದಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮರಳು ಹಾಗೂ ನೀರನ್ನು ಶೇಖರಣೆ ಮಾಡಿಕೊಳ್ಳಬೇಕು ಎಂದರು.
ಗಣೇಶ ಮೂರ್ತಿಗಳನ್ನು ಸಾರ್ವಜನಿಕ ರಸ್ತೆಯಲ್ಲಿ, ಪಾದಾಚಾರಿ ಮಾರ್ಗದಲ್ಲಿ ಪ್ರತಿಷ್ಠ್ಟಾಪನೆ ಮಾಡುವಂತಿಲ್ಲ. ಯಾವುದೇ ಸಂಘ ಸಂಸ್ಥೆ, ಖಾಸಗಿ ಅಥವಾ ವೈಯಕ್ತಿಕವಾಗಿ ಸಾರ್ವಜನಿಕರ ಗಣಪತಿ ಪ್ರತಿಷ್ಠಾಪನೆ ಸಂಬಂಧ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲು ಮಾಡುವಂತಿಲ್ಲ. ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ರೀತಿ ಯಾವುದೇ ಪೆಂಡಾಲ್/ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಯಾವುದೇ ರೀತಿ ಧ್ವನಿ ವರ್ಧಕ ಬಳಕೆ ಮಾಡುವಂತಿಲ್ಲ. ಆಯೋಜಕರು ಗಣಪತಿ ವಿಸರ್ಜನೆಯ ಸಮಯದಲ್ಲಿ ಸ್ವಯಂ ಸೇವಕರು ಅಥವಾ ಸದಸ್ಯರ ಸಹಾಯವನ್ನು ಪಡೆದು ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹಾಗೂ ಈ ಸ್ವಯಂ ಸೇವಕರು ಹಾಗೂ ಸದಸ್ಯರುಗಳಿಗೆ ಗುರುತಿಗಾಗಿ ಗುರುತಿನ ಚೀಟಿ, ಟಿ-ಶರ್ಟ್ ಅನ್ನು ನೀಡುವುದು. ಹಾಗೂ ಪೊಲೀಸ್ ಇಲಾಖೆಯವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು. ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ಪ್ರಾರ್ಥನಾ ಮಂದಿರದ ಮುಂದೆ ಮೆರವಣಿಗೆ ತೆರಳುವಾಗ ಶಾಂತಿಯುತವಾಗಿ ವರ್ತಿಸಬೇಕು ಎಂದು ಅವರು ಹೇಳಿದರು.
ಕೋರ್ಟ್ ಆದೇಶದಂತೆ ಡಿಜೆ ಬಳಸುವಂತ್ತಿಲ್ಲ:
ಮೆರವಣಿಗೆ ವೇಳೆ ಕರ್ಕಶ ಶಬ್ದ ಹೊಮ್ಮಿಸುವ ಧ್ವನಿವರ್ಧಕ/ಡಿಸ್ಕ್ ಜಾಕಿ ಸೌಂಡ್ ಸಿಸ್ಟಂ (ಡಿ.ಜೆ) ಬಳಸುವಂತಿಲ್ಲ., ಶಬ್ದ ಮಿತಿ 10 ಡಿಬಿ (ಎ) ಅಥವಾ ಕನಿಷ್ಟ 8 ಸಾವಿರ ಗರಿಷ್ಠ 10 ಸಾವಿರ ವ್ಯಾಟ್ ಮೀರಿರಬಾರದು. ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ಪ್ರಾರ್ಥನಾ ಮಂದಿರದ ಮುಂದೆ, ಸಾರ್ವಜನಿಕ ಜನಸಂದಣಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಹಾಗೂ ಬಣ್ಣ ಎರಚಾಟ ಮಾಡುವಂತಿಲ್ಲ.
ಗಣೇಶ ಮೂರ್ತಿಗಳ ವಿಸರ್ಜನೆಯು ನಿಗಧಿತ ದಿನದಂದು ನಿಗಧಿತ ವೇಳೆಯಲ್ಲೆ ಆಗುವಂತೆ ಆಯೋಜಕರು ಜವಬ್ದಾರಿ ವಹಿಸಿಕೊಳ್ಳಬೇಕು, ವಿಸರ್ಜನೆ ವೇಳೆ ಈಜುಗಾರರನ್ನೇ ವಿಸರ್ಜನೆಯ ಬಗ್ಗೆ ನೇಮಿಸುವುದು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಲೈಫ್ ಜಾಕೇಟ್ ಗಳನ್ನು ಉಪಯೋಗಿಸುವುದು. ಈಗಾಗಲೇ ಸುಪ್ರಿಂಕೋರ್ಟ್ ಆದೇಶದಂತೆ ನಿಷೇಧಕ್ಕೆ ಒಳಪಟ್ಟಿರುವ ಡಿ.ಜೆ.ಸೌಂಡ್ ಸಿಸ್ಟಮ್ (ಡಿಸ್ಕ್ ಜಾಕಿ) ಅನ್ನು ವಸತಿ ಪ್ರದೇಶ ಹಾಗೂ ವಿಸರ್ಜನಾ ಸ್ಥಳದಲ್ಲಿ ಬಳಸದಂತೆ ತಿಳಿಯಪಡಿಸಲಾಗಿದೆ.
ವಿರ್ಸಜನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಮುಂಚಿತವಾಗಿ ನೀಡಿದ ದಿನಾಂಕವನ್ನು ಹೊರತುಪಡಿಸಿ ಬೇರೆ ದಿನಾಂಕಗಳಂದು ಮಾಡುವಂತಿಲ್ಲ. ಮಕ್ಕಳು ಮತ್ತು ಈಜು ಬಾರದವರನ್ನು ನೀರಿಗೆ ಇಳಿಸುವಂತಿಲ್ಲ. ಸರ್ವೋಚ್ಚ ನ್ಯಾಯಾಲಯವು ನಿಗದಿ ಪಡಿಸಿರುವ ಶಬ್ದ ಮಿತಿಯನ್ನು ಮೀರುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.