ಕಾಸರಗೋಡು: ಸಿಪಿಎಂ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು.
ಅವರು ಮಂಗಳವಾರ ಪಯ್ಯನ್ನೂರಿನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ವಿಜಯನ್ ನೇತೃತ್ವದಲ್ಲಿ ನಡೆಯುತ್ತಿರುವ ಜನರಕ್ಷಾ ಪಾದಾತ್ರೆಗೆ ಚಾಲನೆ ನೀಡಿ ಮಾತನೀಡಿದರು.
ಸಿಪಿಎಂ ನ ಆಡಳಿತದ ಅವಧಿಯಲ್ಲಿ ಕೊಲೆಗಳ ಸರಣಿಯೇ ನಡೆಯುತ್ತಿದೆ .೮೪ ಅಮಾಯಕ ಆರ್ ಎಸ್ ಎಸ್ ನವರನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿರುವ ಹೊಣೆ ಸಿಪಿಎಂಗೆ ಹೋಗುತ್ತದೆ. ಇದೀಗ ಸಿಪಿಎಂ ರಾಜಕೀಯ ಸರ್ಕಸ್ ಮಾಡುತ್ತಿದೆ. ನಾಳೆಯಿಂದ ೧೭ ರ ತನಕ ದೆಹಲಿಯ ಎಕೆಜಿ ಭವನ ಕ್ಕೆ ಜಾಥಾ ನಡೆಸಲಾಗುವುದು. ಎಲ್ಲಾ ರಾಜ್ಯಗಳ ಯುವಮೋರ್ಚಾ ನೇತೃತ್ವದಲ್ಲಿ ನಾಳೆಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಅಲ್ಫೋನ್ಸೋ ಕಣ್ಣಾo ತಾನಂ, ಬಿಜೆಪಿ ಮುಖಂಡರಾದ ವಿ. ಮುರಳೀಧರನ್, ಸಿ.ಟಿ ರವಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ , ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ , ರಿಚರ್ಡ್ ಹೇ, ಶಾಸಕ ಒ. ರಾಜಗೋಪಾಲ್ ಇದ್ದರು.
ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾ: ಸೋಮವಾರ ತಡರಾತ್ರಿ ಮಂಗಳೂರಿಂದ ಆಗಮಿಸಿದ ಅಮಿತ್ ಷಾ ರವರು ಬೇಕಲ ದಲ್ಲಿ ತಂಗಿದ್ದು , ಬೆಳಿಗ್ಗೆ ತಳಿಪರಂಬ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಪಯ್ಯನ್ನೂರಿಗೆ ಆಗಮಿಸಿದ ಅಮಿತ್ ಷಾ ಅವರು , ಈ ಹಿಂದಿನ ವರ್ಷಗಳಲ್ಲಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾದ ಪಕ್ಷದ ಕಾರ್ಯಕರ್ತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಬಳಿಕ ನಡೆದ ಸಮಾರಂಭದಲ್ಲಿ ಜನರಕ್ಷಾ ಯಾತ್ರೆಯನ್ನು ಕುಮ್ಮನಂ ರಾಜಶೇಖರನ್ ರಿಗೆ ಪಕ್ಷದ ಪತಾಕೆ ಹಸ್ತಾಂತರಿಸುವ ಮೂಲಕ ಅಮಿತ್ ಷಾ ರವರು ಚಾಲನೆ ನೀಡಿದರು.
ರಾಜ್ಯದ ೧೧ ಜಿಲ್ಲೆಗಳ ಮೂಲಕ ಇಂದಿನಿಂದ ೧೭ ರ ತನಕ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮತೀಯ ತೀವ್ರವಾದ , ಲವ್ ಜಿಹಾದ್ , ಸಿಪಿಎಂ ನ ಹಿಂಸಾತ್ಮಕ ರಾಜಕೀಯ ಮೊದಲಾದ ಹಲವು ಆರೋಪಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ೧೭ ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.