ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ಜೂ.29ರಂದು ಸರಕಾರಿ ಅಧಿಕೃತ ಭೇಟಿಯಾಗಿರದೆ ಸೌಜನ್ಯಯುತ ಭೇಟಿ ಮಾಡಿದ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಅಲ್ಲಿನ ಕರ್ತವ್ಯ ನಿರತ ಡಾ. ಅರ್ಚನಾ ಅವರುನ್ನು ವಿಳಂಬವಾಗಿ ಭೇಟಿ ಮಾಡಿದ್ದಾರೆಂದು ಆರೋಪಿಸಿ ವೈದ್ಯರನ್ನು ಸಾರ್ವಜನಿಕವಾಗಿ ಆಪಮಾನಿಸಿ ತರಾಟೆಗೆತ್ತಿಕೊಂಡಿರುವ ಘಟನೆಗೆ ಸಂಬಂಧಿಸಿ ಸಂಘ ವೈದ್ಯರನ್ನು ಅಪಮಾನಿಸಿದವರ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪಾಮಾನಿಸಿದ ವಿಡಿಯೋ ರವಾನಿಸಿ ಮಾನಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಭಾರತೀಯ ವೈದ್ಯಕೀಯ ಆಗ್ರಹಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಡಾ. ಗಣೇಶ್ಪ್ರಸಾದ್ ಮುದ್ರಾಜೆ ಅವರು ಮಾತನಾಡಿ ಜಿ.ಪಂ ಅಧ್ಯಕ್ಷರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಬಾಲಕಿಯನ್ನು ಸಂತೈಸಲು ಬಂದಿದ್ದರು ಹೊರತು ಇದು ಅವರ ಅಧಿಕೃತ ಭೇಟಿಯಾಗಿರಲ್ಲಿಲ್ಲ. ಕೇವಲ ಸೌಜನ್ಯದ ಭೇಟಿಯಾಗಿತ್ತು. ಆದರೂ ಅವರು ಅಧಿಕಾರ ದರ್ಪದಿಂದ ವರ್ತಿಸಿದ್ದಾರೆ ವೈದ್ಯರನ್ನು ಅವಮಾನಿಸಿದ್ದಾರೆ. ವೈದ್ಯರು ಮಾತನಾಡಿಸಲು ಬಂದಾಗ ಅವರೊಡನೆ ಉಡಾಫೆ ವರ್ತನೆ ತೋರಿ ಅದನ್ನು ತಮ್ಮ ಹಿಂಬಾಲಕರ ಮೂಲಕ ವಿಡೀಯೋ ಚಿತ್ರಿಕರಣ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ತಪ್ಪು ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದ ಅವರು ಜೊತೆಗೆ ಜಾತಿ ಧರ್ಮ ನೋಡದೆ ಸೇವೆ ನೀಡುತ್ತಿರುವ ವೈದ್ಯರನ್ನು ದಲಿತರ ವಿರುದ್ಧ ಎತ್ತಿಕಟ್ಟು ಹುನ್ನಾರ ಶೋಚನೀಯ ಎಂದರು. ಇತ್ತೀಚೆಗೆ ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಹಾಯಕ ಕಮೀಷನರ್ನಲ್ಲಿ ಮನವಿ ಮಾಡಿದಾಗ ಅವರು ಪುತ್ತೂರಿನಲ್ಲಿ ಇಂತಹ ಘಟನೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ನಾವು ಕೂಡಾ ಡಾ. ಅರ್ಚನಾ ಅವರ ಮೇಲಿನ ಅಪಮಾನಕ್ಕೆ ಸೂಕ್ತ ನ್ಯಾಯಕ್ಕಾಗಿ ಸಹಾಯ ಕಮೀಷನರ್ ಮುಂದ್ರ ಪ್ರಸ್ತಾಪ ಮಾಡಲಿದ್ದೇವೆ ಎಂದು ಹೇಳಿದರು.
ಜಪ್ರತಿನಿಧಿಗಳ ಮೇಲೆ ಎಫ್ಐಆರ್ಗೂ ಹಿಂಜರಿಕೆ: ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ವೈದ್ಯರು ನೀಡಿದ ದೂರಿಗೆ ಸಮರ್ಪಕ ಪ್ರಕರಣ ದಾಖಲಿಸಿಲ್ಲ. ಜನಪ್ರತಿನಿಧಿಗಳ ವಿರುದ್ಧ ಎಫ್ಐಆರ್ ಮಾಡುವುದಕ್ಕೂ ಠಾಣಾಧಿಕಾರಿಗಳು ಹಿಂಜರಿಯುವಷ್ಟರ ಮಟ್ಟಿಗೆ ನಾಡಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದ ಡಾ. ಗಣೇಶ್ ಪ್ರಸಾದ್ ಅವರು ವೈದ್ಯರು ನ್ಯಾಯ ಸಿಗದಿದ್ದರೆ, ಪ್ರತಿಭಟನೆ ಮಾಡಲಿದ್ದೇವೆ ಎಂದರು. ನಮ್ಮ ಹೋರಾಟ ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ. ವ್ಯಯುಕ್ತಿಕ ದ್ವೇಷವೂ ಇಲ್ಲ. ಆದರೆ ವಿಚಾರಕ್ಕೆ ನಮ್ಮ ವಿರೋಧವಿದೆ ಎಂದರು.
ಎಲ್ಲರಿಗೂ ಒಂದೇ ರೀತಿಯ ಸೇವೆ: ಪುತ್ತೂರು ತಾಲೂಕು ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರು ಮಾತನಾಡಿ ಪುತ್ತೂರು ಸರಕಾರಿ ಆಸ್ಪತ್ರೆ ಹಾಗೂ ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ಮತ್ತು ಒಳ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ಆದರೂ ಕೆಲವರು ವೈದ್ಯರ ಮೇಲೆ ಹಲ್ಲೆಗೆ ಮುಂದಾಗುವುದು, ಆಸ್ಪತ್ರೆಗಳಲ್ಲಿ ಗದ್ದಲ ಮಾಡಿ ಭಯದ ವಾತಾವರಣವನ್ನು ಸೃಷ್ಟಿ ಮಾಡುವ ಕೆಲಸಕ್ಕೆ ಮುಂದಾಗುವುದು ವೈದ್ಯ ಸಮುದಾಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಹಣ ಇದ್ದವರಿಗೂ, ಹಣ ಇಲ್ಲದವರಿಗೂ ಯಾವುದೇ ತಾರತಮ್ಯ ಮಾಡದೇ ಆರೋಗ್ಯ ಸೇವೆಯನ್ನು ವೈದ್ಯರು ಮತ್ತು ಆಸ್ಪತ್ರೆಗಳು ನೀಡುತ್ತಿವೆ ಎಂದರು.
ಪ್ರಧಾನಿ ಮೋದಿಯನ್ನು ನೋಡಿ ಕಲಿಯಬೇಕು: ಡಾ. ಸುರೇಶ್ ಪುತ್ತೂರಾಯ ಅವರು ಮಾತನಾಡಿ ಸಾರ್ವಜನಿಕ ಜೀವನದಲ್ಲಿ ವಿವಿಧ ಹುದ್ದೆಗಳಲ್ಲಿರುವ ಜನಪ್ರತಿನಿಧಿಗಳು ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಬೇಕು ಪೌರಕಾರ್ಮಿಕರ ಪಾದ ತೊಳೆಯುವ ಮೂಲಕ ಅತ್ಯಂತ ವಿನಯ ಮತ್ತು ಪ್ರೀತಿ ಪೂರ್ವಕ ನಡವಳಿಕೆಯನ್ನು ಪ್ರದರ್ಶಿಸಿದ ನರೇಂದ್ರ ಮೋದಿ ಅವರು ಎಲ್ಲರಿಗೂ ಆದರ್ಶವಾಗಬೇಕು ಎಂದರು. ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಅಶೋಕ್ ಜಿ.ಕೆ ಅವರು ಮಾತನಾಡಿ ಆ್ಯಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಡದಿದ್ದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತದೆ. ಅದೇ ವೈದ್ಯರಿಗೆ ಹಲ್ಲೆ ನಡೆದರೆ ಕೇಳುವವರಿಲ್ಲ ಎಂದು ಹೇಳಿದರು. ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಗೌರವ ಕಾರ್ಯದರ್ಶಿ ಡಾ. ರವೀಂದ್ರ ಕಜೆ ಅವರು ಮಾತನಾಡಿ ವೈದ್ಯರಿಗೆ ನ್ಯಾಯ ಸಿಗಬೇಕು ಎಂದರು.