ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದ ಬಳಿ ಇರುವ ಪ್ರಸಿದ್ದ ಶ್ರೀ ಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ರಥಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ನಾರಾಯಣಗೌಡ ಈ ವರ್ಷ ಕಾಲಕಾಲಕ್ಕೆ ಮಳೆಯಾಗಿ ರೈತರು ಉತ್ತಮವಾದ ಬೆಳೆಗಳನ್ನು ಬೆಳೆದಿದ್ದಾರೆ, ಸ್ವಾಮಿಯ ಅನುಗ್ರಹದಿಂದ ಶ್ರೀ ಗವಿರಂಗನಾಥ ಸ್ವಾಮಿ ಸರ್ವರಿಗೂ ಒಳಿತನ್ನು ಮಾಡಲಿ, ಈ ಕ್ಷೇತ್ರ ತನ್ನದೇ ಆದ ಮಹಿಮೆಯನ್ನು ಹೊಂದಿದ್ದು ಸ್ವಾಮಿಯ ಕೃಪೆಯಿಂದ ತಾಲೂಕಿನಾದ್ಯಂತ ದನಕರುಗಳಿಗೆ ಯಾವುದೇ ರೀತಿಯ ರೋಗರುಜಿನಗಳು ಇಲ್ಲದೇ ಆರೋಗ್ಯವಂತವಾಗಿವೆ. ಅಲ್ಲದೆ, ಈ ದೇವಾಲಯವು ಪುರಾತನ ಕಾಲದಿಂದಲೂ ಗ್ರಾಮೀಣ ಪ್ರದೇಶದ ಜನರಿಗೆ ಅಪಾರವಾದ ನಂಬಿಕೆಯುಳ್ಳ ಪ್ರಮುಖ ಯಾತ್ರಾ ಸ್ಥಳವಾಗಿದೆ.
ಇಲ್ಲಿ ಪ್ರತಿ ವರ್ಷವೂ ಸಂಕ್ರಾಂತಿಯ ಸಮಯದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಇಲ್ಲಿಗೆ ನೂರಾರು ಕಿಮೀನಿಂದ ದನಗಳನ್ನು ಕರೆತಂದು ಮೂರರಿಂದ ನಾಲ್ಕು ದಿನಗಳ ಕಾಲ ದನಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ನಂತರ ಅಂತಿಮ ದಿನ ಬ್ರಹ್ಮರಥೋತ್ಸವ ನಡೆಯಲಿದ್ದು, ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯ ಜನರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಾರ್ವಜನಿಕರು ಹಾಗೂ ರೈತ ಬಾಂಧವರು ಜಾನುವಾರುಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ಪೂಜೆಗಳನ್ನು ನೆರವೇರಿಸುತ್ತಾರೆ.
ಶ್ರೀಕ್ಷೇತ್ರಕ್ಕೆ ಪ್ರತಿದಿನ ರಾಜ್ಯದಿಂದ ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ರೈತರು ತಮ್ಮ ರಾಸುಗಳಿಗೆ ಯಾವುದೇ ತೊಂದರೆಯಾಗದಂತೆ ಅವುಗಳ ಪೀಳಿಗೆ ಹೆಚ್ಚಿಸುವಂತೆ ಕೋರಿ ಹರಕೆ ಒಪ್ಪಿಸುತ್ತಾರೆ ಜನ ಜಾನುವಾರುಗಳು ಕರು ಹಾಕಿದಾಗ ಅದರ ಮೊದಲ ಹಾಲಿನಿಂದ ಮಾಡಿದ ಗಿಣ್ಣನ್ನು ಸ್ವಾಮಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ತಮ್ಮ ರಾಸುಗಳ ರಕ್ಷಣೆಗೆ ಇಲ್ಲಿ ಗುಡ್ಡದ ಮೇಲಿರುವ ಗವಿರಂಗನಾಥ ಸ್ವಾಮಿ ಸಿದ್ಧ ಹಸ್ತ ಎಂಬುದು ಜನರ ನಂಬಿಕೆ ಪುಟ್ಟ ಮಕ್ಕಳಿಗೆ ಕಿವಿ ಚುಚ್ಚುವುದು, ಹರಕೆಯನ್ನು ಹೊತ್ತವರು ಮಾಂಸಹಾರದ ಪರಗಳನ್ನು ಮಾಡುವುದು ಇಲ್ಲಿನ ವಿಶೇಷ ಎಂದು ತಿಳಿಸಿದರು.