ಕೆ.ಆರ್.ಪೇಟೆ: ತಾಲ್ಲೂಕಿನ ನಗರೂರು ಮಾರ್ಗೋನಹಳ್ಳಿ ಸಮೀಪವಿರುವ ಹಾಲುಮತ ಸಮಾಜದ ಪವಿತ್ರ ಪುಣ್ಯಕ್ಷೇತ್ರ ಶ್ರೀ ಮರಡಿಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ ದೊಡ್ಡಯ್ಯ-ಚಿಕ್ಕಯ್ಯ ಜೋಡಿ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀನಿವಾಸ್ ಅವರು ಜಾತ್ರೆ ಮತ್ತು ರಥೋತ್ಸವ, ಹಬ್ಬ ಹರಿ ದಿನಗಳು ಸಂಸ್ಕೃತಿ ಪರಂಪರೆಯ ಪ್ರತೀಕವಾಗಿವೆ. ಹಾಗಾಗಿ ಎಲ್ಲರೂ ಜಾತ್ರೆ ರಥೋತ್ಸವದಲ್ಲಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು. ನಮ್ಮ ಮರಡಿಲಿಂಗೇಶ್ವರ ಸ್ವಾಮಿಯು ದಕ್ಷಿಣ ಕರ್ನಾಟಕದ ಹಾಲು ಮತ ಸಮಾಜದ ಪವಿತ್ರ ಪುಣ್ಯ ಕ್ಷೇತ್ರವಾಗಿದೆ ಈ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಚಿವರಾದ ನಾರಾಯಣಗೌಡರು ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಯಾತ್ರಿನಿವಾಸ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಒದಗಿಸಿಕೊಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಕುರುಬ ಸಮುದಾಯದ ಬಂಧುಗಳು ತಮ್ಮ ಕುರಿಗಳ ಹಿಂಡುಗಳೊಂದಿಗೆ ಆಗಮಿಸಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಹರಕೆ ತೀರಿಸುವುದು ಇಲ್ಲಿನ ಪ್ರಧಾನ ಸಂಪ್ರದಾಯವಾಗಿದೆ. ಅದರಂತೆ ನೂರಾರು ಕುರಿಗಳನ್ನು ಕರೆತಂದು ರಥೋತ್ಸವಕ್ಕೆ ಮುನ್ನ ಪ್ರದಕ್ಷಿಣೆ ಮಾಡಿಸಲಾಯಿತು.