ಬೆಂಗಳೂರು : ರಾಜ್ಯದ ಶಾಲೆಗಳಿಗೆ ಇಂದು ದಸರಾ ರಜೆ ಮುಕ್ತಾಯಗೊಂಡಿದ್ದು, ಇಂದಿನಿಂದ ರಾಜ್ಯಾದ್ಯಂತ 6-10 ನೇ ತರಗತಿ ಪುನಾರಂಭಗೊಳ್ಳಲಿವೆ. ಜೊತೆಗೆ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತೆ ಆರಂಭವಾಗಲಿದೆ.
ಇಂದಿನಿಂದ ಶಾಲೆ ಪುನಾರಂಭದ ಜೊತೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೂಡ ಆರಂಭವಾಗಲಿದ್ದು, ಅಕ್ಟೋಬರ್ 10 ರಿಂದ 20 ರವರೆಗೆ ನೀಡಲಾಗಿದ್ದ ಮಧ್ಯಂತರ ರಜೆ ಮುಕ್ತಾಯಗೊಂಡಿದ್ದು, ಇಂದಿನಿಂದ ಶಾಲಾ ಮಕ್ಕಳು, ಶಿಕ್ಷಕರು ಶಾಲೆಗೆ ಬರಲಿದ್ದಾರೆ.
ಬಿಸಿಯೂಟ ಸ್ಥಗಿತಗೊಂಡಿದ್ದರು ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಾ ಬಂದಿತ್ತು. ಇದೀಗ ಬಿಸಿಯೂಟ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಮನೆಗೆ ಆಹಾರ ಧಾನ್ಯ ನೀಡುವುದನ್ನು ನಿಲ್ಲಿಸಲಾಗುಉತ್ತದೆ. ಆದರೆ ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲವಾದ್ದರಿಂದ ಶಾಲೆಗೆ ಬಂದು ಬಿಸಿಯೂಟ ಸೇವಿಸದ ಮಕ್ಕಳಿಗೆ ಮಾತ್ರ ಆಹಾರ ಧಾನ್ಯ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.