ಬೆಂಗಳೂರು, ;ಬಜೆಟ್ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಕಾಲಮಿತಿಯೊಳಗೆ ಅನುಷ್ಠಾನವಾಗದೆ ವಿಳಂಬವಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಕಾಸಸೌಧದಲ್ಲಿಂದು ಕೆಡಿಪಿ ಸಭೆ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಉದಾಸೀನ ತೋರುತ್ತಿರುವ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ. ಜನರ ಕಲ್ಯಾಣಕ್ಕಾಗಿ ನಾವು ಬಜೆಟ್ನಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇವೆ.ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅನುಷ್ಠಾನ ಮಾಡಬೇಕು. ಯಾವ ಕಾರಣಕ್ಕಾಗಿ ನೀವು ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಬಜೆಟ್ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಆಯಾ ಆರ್ಥಿಕ ವರ್ಷದೊಳಗೆ ಸಂಪೂರ್ಣವಾಗಿ ಅನುಷ್ಠಾನವಾಗಬೇಕು. ಯಾವುದಾದರೂ ಇಲಾಖೆಯಲ್ಲಿ ಶೇ.100ರಷ್ಟು ಜಾರಿಗೆ ಮಾಡಿದ್ದೀರಾ ಎಂಬ ಪ್ರಶ್ನೆಯನ್ನು ಮುಂದಿಟ್ಟರು.
20 ರಿಂದ 30ರಷ್ಟು ಕಾರ್ಯಕ್ರಮಗಳು ಅನುಷ್ಠಾನವಾಗುವುದೇ ಇಲ್ಲ. ನಿಮ್ಮಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇಷ್ಟೊಂದು ಉದಾಸೀನ ತೋರುವುದು ಸರಿಯಲ್ಲ ಎಂದು ಸಿಡಿಮಿಡಿಗೊಂಡರು. ನಾನು ಮೃದುವಾಗಿದ್ದೇನೆ ಎಂದು ಭಾವಿಸಬೇಡಿ. ಎಲ್ಲದಕ್ಕೂ ಶಿoಸ್ತುಕ್ರಮ ಜರುಗಿಸುವುದೇ ಪರಿಹಾರ ಕ್ರಮವಲ್ಲ. ಇನ್ನು ಮುಂದೆ ಇದಕ್ಕೆಲ್ಲ ನಾನು ಅವಕಾಶ ಕೊಡುವುದಿಲ್ಲ. ಯಾರು ಉದಾಸೀನ ತೋರುತ್ತೀರೋ ಅವರ ಮೇಲೆ ಶಿಸ್ತುಕ್ರಮ ಖಚಿತ ಎಂದು ಎಚ್ಚರಿಕೆ ಕೊಟ್ಟರು.
ನಾನು ಮೌನವಾಗಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯ ಎಂದುಕೊಳ್ಳಬೇಡಿ. ನನಗೆ ಕೆಲಸವಾಗಬೇಕು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡದಿದ್ದರೆ ಸಹಿಸುವುದಿಲ್ಲ. ಇನ್ನು ಮುಂದೆ ನಾನೇ ಕೆಡಿಪಿ ಸಭೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು.
ಯೋಜನೆಗಳ ಅನುಷ್ಠಾನ ವಿಳಂಬ ;ಅಧಿಕಾರಿಗಳಿಗೆ ಸಿಎಂ ತರಾಟೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.