ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಯಕ್ಷಕಾಶಿ ಗುಂಡಬಾಳಕ್ಕೆ ಮಗ ಅಶುತೋಷ, ಮಗಳು ವೃಶಾಲಿ ಅವಳೊಂದಿಗೆ ಆಗಮಿಸಿ ಯಕ್ಷಗಾನ ಹರಕೆ ತೀರಿಸಿದರು.
ಒಂದೇ ಸ್ಥಳದಲ್ಲಿ ಪ್ರತಿವರ್ಷ 150ಕ್ಕೂ ಹೆಚ್ಚು ಬಯಲಾಟ ಸೇವೆ ನಡೆಯುವ ಜಗತ್ತಿನ ಏಕೈಕ ರಂಗಸ್ಥಳ ಗುಂಡಬಾಳ. ಇಲ್ಲಿ ಆಟ ಆಡುವುದು, ಆಡಿಸುವುದು, ನೋಡುವುದು ಒಂದು ಸೇವೆ. ರಂಗಸ್ಥಳಕ್ಕೆ ಹೋಗಿ ನಾಮದ ಹರಕೆ ತಿಲಕವನ್ನು ಹಚ್ಚಿಕೊಂಡು ಬಂದರೂ ಅದೂ ಸೇವೆಯ ಭಾಗವಾಗಿದೆ. ಅಂತಹ ಯಕ್ಷಗಾನ ಪ್ರಿಯ ಗುಂಡಬಾಳ ಮುಖ್ಯಪ್ರಾಣನ ಚರಣದಲ್ಲಿ ಅನಂತಕುಮಾರ ಹೆಗಡೆ ದಂಪತಿಗಳು ಯಕ್ಷಗಾನ ಹರಕೆ ತೀರಿಸಿದರು.
ಯಕ್ಷಗಾನ ರಂಗಮಂದಿರದಲ್ಲಿ ಶ್ರೀಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಮುಖ್ಯಪ್ರಾಣನ ಸನ್ನಿಧಿಯಲ್ಲಿ ವಸಂತ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ನಂತರ ಅನಂತಕುಮಾರ ಹೆಗಡೆ ರಂಗಸ್ಥಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಯಕ್ಷಗಾನ ನಾಮದ ಹರಕೆ ಹಾಕಿಸಿಕೊಂಡರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಟ್, ಶಾಸಕ ಸುನೀಲ ನಾಯ್ಕ, ದೇವಿದಾಸ ರಾಮಚಂದ್ರ ಭಟ್, ಬಿಜೆಪಿ ಮುಖಂಡರು ಇದ್ದರು.