ಬೆಂಗಳೂರು, – ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವ ಸಚಿವ ಆನಂದ್ ಸಿಂಗ್ ಅವರನ್ನು ಖುದ್ದಾಗಿ ಹೈಕಮಾಂಡ್ ನಾಯಕರ ಭೇಟಿ ಮಾಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ವಾರ ತಮ್ಮೊಂದಿಗೆ ಅವರನ್ನೂ ದೆಹಲಿಗೆ ಕರೆದೊಯ್ಯಲು ತೀರ್ಮಾಸಿದ್ದಾರೆ.
ಸಚಿವ ಆರ್ ಅಶೋಕ್ ನಿವಾಸದಲ್ಲಿ ನಡೆದ ಸಂಧಾನ ಸಭೆ ಮೂಲಕ ಸಚಿವ ಆನಂದ್ ಸಿಂಗ್ ಅಸಮಾಧಾನ ಶಮನವಾದಂತಾಗಿದೆ. ಸಭೆಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸುವ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಆ.15ರ ನಂತರ ಸಿಎಂ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳುತ್ತಿದ್ದು, ತಮ್ಮ ಜೊತೆಯಲ್ಲಿ ಆನಂದ್ ಸಿಂಗ್ ಅವರನ್ನೂ ಕರೆದೊಯ್ದು, ವರಿಷ್ಠರನ್ನು ಭೇಟಿ ಮಾಡಿಸಿ ಮಾತುಕತೆ ನಡೆಸಲಿದ್ದಾರೆ.ಆನಂದ್ ಸಿಂಗ್ ಖಾತೆ ಬದಲಾವಣೆ ಕುರಿತು ಇಟ್ಟಿರುವ ಬೇಡಿಕೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೈಕಮಾಂಡ್ ನೀಡುವ ನಿರ್ಧಾರ, ಸಲಹೆ-ಸೂಚನೆಗಳ ವಿಚಾರದಲ್ಲಿ ಆನಂದ್ ಸಿಂಗ್ ಅವರಿಗೆ ಯಾವುದೇ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಅವರನ್ನೇ ಕರೆದೊಯ್ದು ಅವರ ಸಮ್ಮುಖದಲ್ಲಿ ಈ ವಿಚಾರದಲ್ಲಿ ಚರ್ಚೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ.
ಆ.15ರ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮುಗಿಸಿದ ನಂತರ ಹೈಕಮಾಂಡ್ ನಾಯಕರ ಭೇಟಿಗೆ ದಿನಾಂಕ ನಿಗದಿಪಡಿಸಿಕೊಂಡು ಮುಖ್ಯಮಂತ್ರಿಗಳು ಆನಂದ್ ಸಿಂಗ್ ಜೊತೆ ದೆಹಲಿಗೆ ತೆರಳಲಿದ್ದಾರೆ.