ದಾವಣಗೆರೆ, : ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್ ಅವರ ಕಾರು ಅಪಘಾತವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ನಡೆದಿದೆ. ದಾವಣಗೆರೆ ತಾಲ್ಲೂಕಿನ ಆನಗೋಡು ಗ್ರಾಮದ ಬಳಿ ಘಟನೆ ಸಂಭವಿಸಿದ್ದು, ಬೆಂಗಳೂರಿನಿಂದ ಬರುತ್ತಿದ್ದ ಮಾಜಿ ಸಚಿವರ ಕಾರು, ಮುಂದೆ ಹೋಗುತ್ತಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ದಿವಂಗತ ನಟ ಶಂಕರ್ ನಾಗ್ ಅವರ ಕಾರು ಅಪಘಾತವಾಗಿದ್ದ ಸ್ಥಳದಲ್ಲೇ ಈ ಕಾರು ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಸಚಿವರ ಕಾರಿನ ಮುಂಭಾಗದ ಬಾನೇಟ್ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಎಸ್ಪಿ ಹನುಮಂತರಾಯ ಭೇಟಿ ನೀಡಿ, ಮಾಜಿ ಸಚಿವರ ಆರೋಗ್ಯ ವಿಚಾರಣೆ ನಡೆಸಿದರು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಾಜಿ ಸಚಿವ ಯು.ಟಿ ಖಾದರ್ ರವರಿಗೆ ಯಾವುದೇ ಗಾಯವಾಗಿಲ್ಲ. ಅಪಘಾತ ಸಂಭವಿಸಿದ್ದರಿಂದ ತಮ್ಮ ಕಾರು ಬಿಟ್ಟು ಬೇರೊಂದು ಕಾರಿನ ಮೂಲಕ ಖಾದರ್ ತೆರಳಿದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.