ಬೆಳಗಾವಿ: “ಬ್ರಿಟಿಷರಿಗಿಂತ ಹೆಚ್ಚು ಸಮಾಜವನ್ನು ಒಡೆದು ಆಡಳಿತ ನಡೆಸಿದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
“ಅವರು ಮುಖ್ಯಮಂತ್ರಿಯಾಗಿದಂತಹ ಸಮಯದಲ್ಲಿ 3000 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಒಬ್ಬ ರೈತನ ಮನೆಗೆ ಹೋಗಿ ಸಂತೈಸುವ ಕಾರ್ಯ ಸಿದ್ದರಾಮಯ್ಯ ಮಾಡಿಲ್ಲ. ಇನ್ನು ಸಮಾಜವನ್ನು ಒಡೆದು ಆಳಿದ್ದಕ್ಕೆ ಹಲವಾರು ಉದಾಹರಣೆಗಳಿವೆ. ಇಂತಹ ವ್ಯಕ್ತಿಗೆ ಈಗ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಅಥವಾ ಟೀಕಿಸುವ ಯಾವ ಅಧಿಕಾರವಿದೆ” ಎಂದು ಪ್ರಶ್ನಿಸಿದರು.
“ಟಿಪ್ಪು ಸುಲ್ತಾನ್ ಜಯಂತಿಯ ಹೆಸರಿನಲ್ಲಿ ಗಲಭೆಯನ್ನು ಸೃಷ್ಟಿಸಿದರು. ಲಿಂಗಾಯತ ವೀರಶೈವ ಎಂಬ ಅನಾವಶ್ಯಕ ಭೇದಗಳನ್ನು ಸೃಷ್ಟಿಸಿ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡಿದರು. ಅವರ ಇಂತಹ ಕೆಲಸಗಳಿಂದಲೇ ಒಬ್ಬ ಮುಖ್ಯಮಂತ್ರಿಯಾಗಿದ್ದರು ಅವರ ಅವರ ಊರಾದ ಮೈಸೂರಿನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೆ ಕ್ಷೇತ್ರದಲ್ಲಿ ನಿತ್ತು ಗೆಲ್ಲುವ ಪರಿಸ್ಥಿತಿ ಅವರದಾಗಿತ್ತು” ಎಂದು ಕಟೀಲ್ ಟೀಕಿಸಿದರು.