ಮಡಿಕೇರಿ: ನಗರಸಭೆಯಲ್ಲಿ ಏಪ್ರಿಲ್ 2ರಿಂದ ನಗದು ರಹಿತ ಆಡಳಿತ ಜಾರಿಗೆ ಬಂದಿದ್ದು, ನಾಗರಿಕರು ಸಹಕರಿಸಬೇಕಾಗಿ ನಗರಸಭೆ ಪೌರಾಯುಕ್ತರಾದ ಬಿ.ಶುಭಾ ಅವರು ಕೋರಿದ್ದಾರೆ.
ಪೌರಾಡಳಿತ ನಿರ್ದೇಶನಾಲಯವು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸ್ವೀಕೃತಿ ವ್ಯವಸ್ಥೆಯನ್ನು ಖಜಾನೆ-2 ತಂತ್ರಾಂಶದಲ್ಲಿ ಬಳಸಿ ಅಳವಡಿಸುವ ಬಗ್ಗೆ ತಿಳಿಸಿದ್ದು, ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಮಡಿಕೇರಿ ನಗರಸಭೆಗೆ ಪಾವತಿಸಬೇಕಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ, ಮಳಿಗೆ ಬಾಡಿಗೆ ಮತ್ತು ಇನ್ನಿತರ ಸೇವಾ ಶುಲ್ಕವನ್ನು ಸಾರ್ವಜನಿಕರು ಮತ್ತು 3ನೇ ವ್ಯಕ್ತಿಗಳಿಂದ ಸ್ವೀಕರಿಸಲಾಗುವ ಪಾವತಿಗಳನ್ನು ಸ್ವೀಕೃತಿ ತಂತ್ರಾಂಶದ ಮೊಲಕ ಓವರ್ ದ ಕೌಂಟರ್ ಚಲನ್ ಪಡೆದು ನೇರವಾಗಿ ಬ್ಯಾಂಕಿನ ನಗದು/ಡಿಡಿ/ಚೆಕ್ ಅಥವಾ ಆನ್ ಲೈನ್ ಇ-ಪಾವತಿ/ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಿದೆ.
ಸ್ವೀಕೃತಿ ಪುರಾವೆಯಾಗಿ ಹಣ ಸಂದಾಯದ ಒಂದು ಚಲನ್ ಭಾಗವನ್ನು ತಕ್ಷಣವೇ ಪಡೆಯಬೇಕಾಗಿದೆ ಹಾಗೂ ಸಾರ್ವಜನಿಕರು ಯಾರ ಬಳಿಯೂ ಹಣ ನೀಡದೇ ತಾವೇ ಖುದ್ದು ಬ್ಯಾಂಕ್ ನಲ್ಲಿ ಪಾವತಿಸಬೇಕು. ಸಾರ್ವಜನಿಕರಿಂದ 3ನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೆ ಅದಕ್ಕೆ ಜವಾಬ್ದಾರಿ/ನಷ್ಟಕ್ಕೆ ನಗರಸಭೆ ಹೊಣೆಯಲ್ಲವೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.