ಮಂಡ್ಯ: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕಿಗೆ ಜ. 16ರೊಳಗೆ ಲಸಿಕೆ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಎರಡು ಲಸಿಕೆಗಳಿಗೆ ಸರ್ಕಾರದ ಅನುಮೋದನೆ ದೊರಕಿರುವ ಹಿನ್ನೆಲೆಯಲ್ಲಿ ಧನುರ್ಮಾಸ ಮುಗಿದ ಕೂಡಲೇ ಲಸಿಕೆ ನೀಡುವ ಕಾರ್ಯ ಆರಂಭವಾಗುವ ಸಾಧ್ಯತೆಗಳಿವೆ. ಕೊರೋನಾ ಲಸಿಕೆ ಸಂಗ್ರಹಿಸಿಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕೋವಿಡ್ ಲಸಿಕೆಯನ್ನು ಮಿಮ್ಸ್ ಸೇರಿದಂತೆ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಲಸಿಕೆ ಇಡುವುದಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಹಾಲಿ 124 ಐಎಲ್ಆರ್ (ಐಸ್ಲೈನ್ ರೆಫ್ರಿಜಿರೇಟರ್)ಗಳಿವೆ. ಇದರಲ್ಲಿ ಸುಮಾರು 4 ಲಕ್ಷ ಲಸಿಕೆ ಸಂಗ್ರಹಿಸಿಡಲು ಸಾಧ್ಯವಿದೆ. ಖಾಸಗಿ ಆಸ್ಪತ್ರೆಗಳ ಪೈಕಿ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಮಾತ್ರ ಐಎಲ್ಆರ್ ವ್ಯವಸ್ಥೆ ಇದೆ. 115 ಡೀಪ್ ಫ್ರೀಜರ್, 120 ಕೋಲ್ಡ್ ಚೈನ್ ಸೆಂಟರ್ (ವ್ಯಾಕ್ಸಿನ್ ಕ್ಯಾರಿಯರ್, ಐಸ್ ಬಾಕ್ಸ್, ಥರ್ಮಾಮೀಟರ್ ಒಳಗೊಂಡ ಕಿಟ್)ಗಳನ್ನು ರೆಡಿ ಮಾಡಿಟ್ಟುಕೊಳ್ಳಲಾಗಿದೆ. ಹೆಚ್ಚುವರಿಯಾಗಿ 54 ಐಎಲ್ಆರ್ ಗಳು ಕೆಲವೇ ದಿನಗಳಲ್ಲಿ ಬರಲಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ ಅವರು ತಿಳಿಸಿದರು.
ಮೊದಲ ಹಂತದಲ್ಲಿ ಲಸಿಕೆ ನೀಡುವುದಕ್ಕೆ 600 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಶುಶ್ರೂಷಕಿಯರನ್ನು ನಿಯೋಜಿಸಲಾಗಿದೆ. ಇವರೆಲ್ಲರಿಗೂ ಲಸಿಕೆ ನೀಡುವ ಸಂಬಂಧ ತರಬೇತಿ ನೀಡಿದೆ. ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇದ್ದಲ್ಲಿ ಲಸಿಕೆ ಕಾರ್ಯಕ್ಕೆ ತೊಡಗಿಸಲಾಗುತ್ತದೆ. ಮೊದಲ ಹಂತದಲ್ಲಿ ಲಸಿಕೆ ನೀಡುವುದಕ್ಕೆ ವೈದ್ಯರು, ದಾದಿಯರು, ತಾಂತ್ರಿಕ ತಜ್ಞರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಸರ್ಕಾರಿ-ಖಾಸಗಿ ವೈದ್ಯರು ಸೇರಿದಂತೆ 13,227 ಸಾವಿರ ಜನರನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಕೊರೋನಾ ಲಸಿಕೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊಠಡಿಗಳ ಕೊರತೆ ಇರುವ ಕಡೆಗಳಲ್ಲಿ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಕೊರತೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಶಾಲೆಗಳು, ಹಾಸ್ಟೆಲ್ಗಳು, ಉಪಕೇಂದ್ರಗಳು, ಸಮುದಾಯ ಭವನಗಳನ್ನು ಗುರುತಿಸಿ ಲಸಿಕೆ ನೀಡುವುದಕ್ಕೆ ಅಗತ್ಯ ಕ್ರಮ ವಹಿಸಿದೆ.
ಕೊರೋನಾ ಲಸಿಕೆಯನ್ನು ಸುಗಮವಾಗಿ ನೀಡುವುದಕ್ಕೆ ಮೂರು ಕೊಠಡಿಗಳ ಅವಶ್ಯಕತೆ ಇದೆ. ಒಂದು ಕೊಠಡಿಯಲ್ಲಿ ಲಸಿಕೆ ಪಡೆಯುವವರ ಗುರುತಿನ ಚೀಟಿ ನೋಂದಣಿ ಮಾಡಿಕೊಳ್ಳಲಾಗುವುದು. ಮತ್ತೊಂದು ಕೊಠಡಿಯಲ್ಲಿ ಲಸಿಕೆ ನೀಡುವುದು, ಲಸಿಕೆ ಪಡೆದವರನ್ನು ಮತ್ತೊಂದು ಕೊಠಡಿಯಲ್ಲಿ ಕೂರಿಸಿ 20 ರಿಂದ 30 ನಿಮಿಷ ಅವರ ಆರೋಗ್ಯದ ಮೇಲೆ ನಿಗಾ ಇಡಲು ಬಳಸಲಾಗುತ್ತಿದ್ದು, ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ಗಳಾಗಿ ಗುರುತಿಸಿರುವ 13,227 ಸಾವಿರ ಜನರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ ಪೆÇಲೀಸರು, ಕಂದಾಯ, ಪೌರ ಕಾರ್ಮಿಕರು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಎಲ್ಲರೂ, 50 ವರ್ಷ ಕೆಳಪಟ್ಟ ವಿವಿಧ ರೋಗಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲೇ ವ್ಯಾಕ್ಸಿನ್ ಸಂಗ್ರಹಾಗಾರ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗಿದ್ದು, ಅದರಲ್ಲಿ ಹೆಚ್ಚು ಲಸಿಕೆ ದಾಸ್ತಾನು ಮಾಡುವುದಕ್ಕೆ ಅನುಕೂಲ ಮಾಡಿಕೊಂಡಿದೆ.
ಮಂಡ್ಯ ಕೊರೋನಾ ಲಸಿಕೆ ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಚುನಾವಣಾ ಬೂತ್ಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಉಪಯೋಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಅವು ಕೋವಿಡ್ ಲಸಿಕೆ ನೀಡುವುದಕ್ಕೆ ಯೋಗ್ಯವಾಗಿವೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿರುವ ಅವರು, ಕೋವಿಡ್ ಲಸಿಕಾ ಕೇಂದ್ರಗಳು ಮೂರು ಕೊಠಡಿಗಳನ್ನು ಹೊಂದಿರಬೇಕು. ಪ್ರತ್ಯೇಕ ಪ್ರವೇಶ, ನಿರ್ಗಮನ ದ್ವಾರಗಳು ಇರಬೇಕು. ಫಲಾನುಭವಿಗಳು ಕುಳಿತುಕೊಳ್ಳುವುದಕ್ಕೆ ಸಾಕಷ್ಟು ಸ್ಥಳಾವಕಾಶವಿರಬೇಕು. ಕೈ ತೊಳೆಯಲು, ಶೌಚಾಲಯ ವ್ಯವಸ್ಥೆ ಜೊತೆಗೆ ಸಾಕಷ್ಟು ಗಾಳಿ-ಬೆಳಕು ಹೊಂದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿರುವುದಲ್ಲದೆ, ಕೋವಿಡ್ ಲಸಿಕೆ ನೀಡಿದ ಬಳಿಕ 30×40 ಅಳತೆಯ ಡ್ರೈ ಸ್ಟೋರೇಜ್ಜಾಗವನ್ನು ಗುರುತಿಸಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.