ಹಾಸನ, – ತಮ್ಮ ತೋಟದ ಬೆಳೆ ಹಾನಿ ಮಾಡುತ್ತಿವೆಯೆಂದು ಮಂಗಗಳನ್ನೇ ಹಿಡಿದು ಕೊಂದು ಹಾಕಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲೀಸರು ದಂಪತಿ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಅರೆಹಳ್ಳಿ ಠಾಣೆ ಪೊಲೀಸರು ಉಗನೆ ಗ್ರಾಮದ ಯಶೋಧ- ರಾಮು ದಂಪತಿ ಹಾಗೂ ಪ್ರಸನ್ನ, ರುದ್ರೇಗೌಡ ಮತ್ತು ಚಾಲಕ ಮಂಜು ಎಂಬುವವರನ್ನು ಬಂಧಿಸಿದ್ದು ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ಮಂಗಗಳನ್ನು ಸ್ಥಳಾಂತರ ಮಾಡಲು ಜಮೀನಿನ ಮಾಲೀಕ ಪ್ರಸನ್ನ, ರುದ್ರೇಗೌಡ ಎಂಬುವರು ಯಶೋಧ-ರಾಮು ದಂಪತಿಗೆ 40 ಸಾವಿರಕ್ಕೆ ಗುತ್ತಿಗೆ ನೀಡಿದ್ದರು.
ಜು.28ರಂದು ಆಹಾರದ ಆಸೆ ತೋರಿಸಿ ಯಶೋಧ ಮತ್ತು ರಾಮು ದಂಪತಿ 50ಕ್ಕೂ ಹೆಚ್ಚು ಕೋತಿಗಳನ್ನು ಸೆರೆ ಹಿಡಿದು ಒಂದು ಚೀಲದಲ್ಲಿ ಬಂಧಿಸಿಟ್ಟಿದ್ದರು. ಆ ಸಂದರ್ಭದಲ್ಲಿ ಬರೋಬ್ಬರಿ 38 ಕೋಟಿಗಳು ಉಸಿರುಗಟ್ಟಿ ಮೃತಪಟ್ಟಿದ್ದವು. ಇದರಿಂದ ಭಯಭೀತರಾದ ಆರೋಪಿಗಳು ಅವುಗಳನ್ನು ರಾತ್ರೋ ರಾತ್ರಿ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಚೌಡಹಳ್ಳಿ ಗ್ರಾಮದಲ್ಲಿ ಬಿಸಾಡಿ ಪರಾರಿಯಾಗಿದ್ದರು.ಮೂಕ ಪ್ರಾಣಿಗಳ ದಾರುಣ ಹತ್ಯೆ ಕಂಡು ಜನರು ರೊಚ್ಚಿಗೆದ್ದಿದ್ದು , ಆ ಸಂದರ್ಭದಲ್ಲಿ ನಿತ್ರಾಣಗೊಂಡಿದ್ದ ಹಲವು ಮಂಗಗಳಿಗೆ ಸ್ಥಳೀಯರು ಆರೈಕೆ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಅರೆಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಗಳನ್ನು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಪೊಲೀಸರ ಮುಂದೆ ಆರೋಪಿಗಳು ತಿಳಿಸಿದ್ದಾರೆ. ಮಂಗಗಳು ಮೃತಪಟ್ಟಿರುವುದು ತಿಳಿದು ಆಂಜನೇಯ ದೇಗುಲದಲ್ಲಿ ಪೂಜೆ ಮಾಡಿಸಿದ್ದಾಗಿ ಪ್ರಾಣಿ ಹಂತಕರು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಪ್ರಕರಣವು ರಾಜ್ಯಾದ್ಯಂತ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು ರಾಜ್ಯ ಹೈ ಕೋರ್ಟು ಸುಮೋಟು ಪ್ರಕರಣ ದಾಖಲಿಸಿಕೊಂಡಿತ್ತು.