ಮೈಸೂರು: ಮಕ್ಕಳಿಗೆ ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಬೋಧಿಸಬೇಕಾದ ಶಿಕ್ಷಕಿಯೋರ್ವರು ಮಕ್ಕಳ ಬಿಸಿಯೂಟದ ಅಕ್ಕಿಯನ್ನೇ ಕದ್ದು ಅಂಗಡಿಗೆ ಮಾರಾಟ ಮಾಡಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ ಎಂಬವರೇ ಬಿಸಿಯೂಟದ ಅಕ್ಕಿಯನ್ನು ಮಾರಾಟ ಮಾಡಿದ್ದಾರೆ. ಒಂದು ಕ್ವಿಂಟಾಲ್ ಅಕ್ಕಿಯನ್ನು ಶಿಕ್ಷಕಿ ಪ್ರತಿಭಾ ಡಿ.ಬಿ.ಕುಪ್ಪೆಯ ಚಿಲ್ಲರೆ ಅಂಗಡಿ ಮಾಲೀಕ ಸುಮೇಶ ಎಂಬವರಿಗೆ ಮಾರಾಟ ಮಾಡಿದ್ದಾರೆ.
ಶಾಲೆಯಿಂದ ಅಕ್ಕಿಯನ್ನು ರಾತ್ರಿ 8ಗಂಟೆ ಸಮಯದಲ್ಲಿ ಆಟೋದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುವಾಗ ಶಾಲೆಯ ಎಸ್.ಡಿ.ಎಮ್.ಸಿ.ಸದಸ್ಯರಾದ ರಾಮು ಎಂಬವರು ಅಕ್ಕಿ ಮಾರಾಟ ಮಾಡುವುದನ್ನು ಕಂಡು ಹಿಡಿದಿದ್ದಾರೆ. ಈ ಕುರಿತು ರಾಮು ಮಾತನಾಡಿ ನಾನು ಪೋಸ್ಟ್ ಆಫೀಸ್ ರಸ್ತೆಯಿಂದ ಬರುತ್ತಿದ್ದೆ. ಆಗ ಶಾಲೆಯ ಕಡೆಯಿಂದ ವಾಹನ ಹೋಯಿತು. ಶಾಲೆಗೆ ಈಗ ಯಾರು ಬಂದಿದ್ದರೆಂದು ವಾಹನ ಹಿಂಬಾಲಿಸಿ ನೋಡಿದಾಗ ಶಿಕ್ಷಕಿ ಅಕ್ಕಿ ಮಾರಾಟ ನಡೆಸಿದ್ದರು.
ಕೂಡಲೆ ತಾಲೂಕು ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯರಿಗೆ ಮಾಹಿತಿ ನೀಡಿದ್ದೇನೆ ಎಂದರು. ರಾಮು ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿರುಪತಿ ಹಾಗೂ ತಾ.ಪಂ.ಸದಸ್ಯರಾದ ಸರೋಜಿನಿ ಬಲರಾಮು ಎಂಬುವರಿಗೆ ತಿಳಿಸಿದ್ದಾರೆ ತಕ್ಷಣ ಇವರು ಅಂಗಡಿ ತೆರಳಿ ಅಕ್ಕಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ಷರ ದಾಸೋಹದ ನಿರ್ದೇಶಕರು ಭೇಟಿ ನೀಡಿ ಶಾಲಾ ಅಕ್ಕಿ ಎಂದು ವರದಿ ತೆಗೆದುಕೊಂಡು ಹೋಗಿದ್ದಾರೆ..