ಬೆಂಗಳೂರು, ;ಪೊಲೀಸ್ ಇನ್ಸ್ಪೆಕ್ಟರ್ ಸಿವಿಲ್ ವೃಂದದ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತ 70:30ಅನ್ನು ಪರಿಷ್ಕರಿಸಿ 50:50ಕ್ಕೆ ಹೆಚ್ಚಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಅವರು ಎಎಸ್ಐ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಬಡ್ತಿ ನೀಡುವ ಸೇವಾ ಅವಧಿಯನ್ನು ಐದು ವರ್ಷಕ್ಕೆ ಬದಲಾಗಿ ಮೂರು ವರ್ಷಗಳಿಗೆ ಇಳಿಸಬೇಕು ಅಥವಾ ಅರ್ಹತೆಗನುಗುಣವಾಗಿ ಭರ್ತಿ ಮಾಡಲು ನಿಯಮಾನುಸಾರ ಮಾರ್ಪಾಡು ಆದೇಶ ಹೊರಡಿಸಬೇಕೆಂದು ಕೋರಿದ್ದಾರೆ.
ಕಳೆದ 2003 ರಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಹುದ್ದೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಲಾಗುತ್ತಿದೆ. ಶೇ.75ರಷ್ಟು ಮಂದಿ ಪದವೀಧರರಾಗಿದ್ದು, ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದರೂ ಮುಂಬಡ್ತಿ ದೊರೆಯದೆ ಒಂದೇ ಹುದ್ದೆಯಲ್ಲಿ ಇರುವಂತಾಗಿದೆ. ಇದರಿಂದ ಸಿಬ್ಬಂದಿಗಳಲ್ಲಿ ಆತ್ಮಸ್ಥೈರ್ಯ ಮತ್ತು ದಕ್ಷತೆ ಇಳಿಮುಖವಾಗುತ್ತಿದೆ.
ಸೇವಾ ನಿರತ ಸಿಬ್ಬಂದಿಗಳು ಪಿಎಸ್ಐ ವೃಂದದ ನೇರ ನೇಮಕಾತಿಗೆ ಸ್ಪರ್ಧಿಸಿದ್ದರೂ ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಅಂಕ ಪಡೆದು ಆಯ್ಕೆಯಾಗುತ್ತಿದ್ದಾರೆ. ಆದರೆ, ಸೇವಾ ನಿರತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಗರಿಷ್ಠ ಅಂಕ ಪಡೆಯಬೇಕಾಗಿದೆ. ಶೇ.90ರಷ್ಟು ಸಿಬ್ಬಂದಿ ಸಮೀಪ ಸ್ಪರ್ಧಿಗಳಾಗಿ ಕೇವಲ ಅರ್ಧ ಅಂಕಗಳಲ್ಲಿ ಮಾತ್ರ ವ್ಯತ್ಯಾಸವಾಗಿ ಪಿಎಸ್ಐ ಹುದ್ದೆಗೆ ಅರ್ಹರಾಗುತ್ತಿಲ್ಲ.