ಮಡಿಕೇರಿ:ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಮುಂಗಾರಿನ ಅವಧಿಯಲ್ಲಿ ಭೂಕುಸಿತ ಉಂಟಾಗಿ, ಬಳಿಕ ಲೋಕೋಪಯೋಗಿ ಇಲಾಖೆ ವತಿಯಿಂದ ತಾತ್ಕಾಲಿಕ ಕಾಮಗಾರಿಗಳು, ರಕ್ಷಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಇದೀಗ ಈ ರಸ್ತೆಯಲ್ಲಿ ಹೆಚ್ಚಿನ ಭಾರ ಹೊಂದಿರುವ ಸರಕು ಸಾಗಣೆ ವಾಹನಗಳ ಸಂಚಾರವನ್ನು ಮುಂದಿನ ಜನವರಿ 15 ರವರೆಗೆ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಈ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ, ಕಾರು, ಜೀಪು ಮುಂತಾದ ಲಘು ವಾಹನ, ಬಸ್ಸು ಮತ್ತು ಲಾರಿಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ. ಅತೀ ಭಾರ ಹೊತ್ತ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧಿಸಿದೆ. ಸಂಚಾರಕ್ಕೆ ಅನುಮತಿಸಿರುವ ವಾಹನಗಳು ಅರಣ್ಯ ಭಾಗದಲ್ಲಿ ಗರಿಷ್ಠ ಗಂಟೆಗೆ 40 ಕಿ.ಮೀ. ವೇಗ ಮೀರದಂತೆ ಹಾಗೂ ನಿಗದಿತ ಅವಧಿಯಲ್ಲಿ ಈ ಪ್ರದೇಶವನ್ನು ಹಾದು ಹೋಗುವಂತೆ ಸಂಚರಿಸುವುದು. ಅಲ್ಲದೆ, ಈ ಪ್ರದೇಶದಲ್ಲಿ ವಾಹನಗಳ ತಂಗುವಿಕೆಯನ್ನು ನಿಷೇಧಿಸಿದೆ. ಈ ಆದೇಶದ ಉಲ್ಲಂಘನೆಯು ಕಾನೂನು ರೀತ್ಯಾ ದಂಡನೀಯವೆಂದು ಆದೇಶದಲ್ಲಿ ತಿಳಿಸಲಾಗಿದೆ.