ಚಾಮರಾಜನಗರ: ಪತಿಗೆ ಹಲ್ಲೆ ನಡೆಸಿ ಪತ್ನಿ ಮಾಂಗಲ್ಯ ಸರವನ್ನು ಸರಗಳ್ಳರು ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಕುದೇರುವಿನ ಪೊಲೀಸ್ ಠಾಣೆ ಬಳಿ ನಡೆದಿದೆ.
ಎಲಕ್ಕೂರು ಗ್ರಾಮದ ನಿವಾಸಿ ಮಹಾದೇವಮ್ಮ ಚಿನ್ನ ಕಳೆದುಕೊಂಡವರಾಗಿದ್ದು, ಪ್ರತಿರೋಧವೊಡ್ಡಿದ ಅವರ ಪತಿ ಮೇಲೆ ಹಲ್ಲೆ ನಡೆಸಿದ್ದರಿಂದ ಗಂಭೀರಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಪೊಲೀಸ್ ಠಾಣೆ ಬಳಿಯೇ ನಡೆದಿರುವುದರಿಂದ ಜನ ಭಯಭೀತರಾಗಿದ್ದಾರೆ. ಮಾಸ್ಕ್ ಹಾಕಿಕೊಂಡು ದಾಳಿ ನಡೆಸಿರುವುದರಿಂದ ಸರಗಳ್ಳರನ್ನು ಗುರುತಿಸುವುದು ಕೂಡ ಕಷ್ಟವಾಗಿದೆ.
ಮಹಾದೇವಮ್ಮ ತನ್ನ ಪತಿ, ಹಾಗೂ ಇಬ್ಬರು ಸೊಸೆಯಂದಿರ ಜೊತೆಗೆ ಕುದೇರುಗೆ ಬರುತ್ತಿದ್ದ ವೇಳೆ ಪಲ್ಸರ್ ಬೈಕಿನಲ್ಲಿ ಬಂದ ಮೂವರು ಮಾಸ್ಕ್ ಧಾರಿಗಳು ಏಕಾಏಕಿ ಸರ ಕಿತ್ತಿದ್ದಾರೆ. ಇದಕ್ಕೆ ಪ್ರತಿರೋಧವೊಡ್ಡಿದ ಪತಿ ಹಾಗೂ ಮಹಾದೇವಮ್ಮಳಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. 30 ಗ್ರಾಂ ಚಿನ್ನದ ತಾಳಿಯನ್ನು ಸರಗಳ್ಳರು ಕಸಿದುಕೊಂಡು ಹೋಗಿದ್ದು, ಗಂಭೀರವಾಗಿ ಗಾಯಗೊಂಡ ಮಹಾದೇವಮ್ಮ ಅವರ ಪತಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಆಗಿಂದಾಗ್ಗೆ ಕುದೇರು ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳು ನಡೆಯುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಹೆಚ್.ಡಿ. ಆನಂದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸರಗಳ್ಳತನ ಪ್ರಕರಣ ಭೇದಿಸಲು 8 ಮಂದಿಯ ವಿಶೇಷ ತಂಡ ರಚಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.