ಮಳವಳ್ಳಿ: ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮೈತ್ರಿ ಸರ್ಕಾರದ ಜೊತೆ ಸೇರಿಕೊಂಡು ದೇಶಕ್ಕೆ ಸುಭದ್ರ ಸರ್ಕಾರ ನೀಡಲು ನಾವೆಲ್ಲರೂ ಸೇರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ರಾಜ್ಯದಿಂದ 20 ಸಂಸದರ ಜೊತೆ 21ನೇಯವನಾಗಿ ನಿಖಿಲ್ನ್ನು ಸಂಸತ್ತಿಗೆ ಕರೆದೊಯ್ಯಲು ನೀವೆಲ್ಲರೂ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಮಳವಳ್ಳಿ ತಾಲೂಕಿನ ತಳಗವಾದಿ, ಹಾಡ್ಲಿ ಹಾಗೂ ಹಲಗೂರಿನಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ನಿಖಿಲ್ ನನ್ನ ಮೊಮ್ಮಗ ಎಂದು ನಾನು ಪ್ರಚಾರಕ್ಕೆ ಬಂದಿಲ್ಲ. 8 ಜನ ಶಾಸಕರ ಒತ್ತಾಯದ ಮೇರೆಗೆ ಅವನು ಮಂಡ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾನೆ. ಅವನು ನಿಮ್ಮ ಮನೆಯ ಮಗ, ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷ ಸೇರಿಕೊಂಡು ಭ್ರಷ್ಟಚಾರ ನಿರ್ಮೂಲನೆ ಮಾಡುವುದರ ಜೊತೆಗೆ ದೇಶಕ್ಕೆ ಸುಭದ್ರ ಸರ್ಕಾರ ನೀಡುವುದಕ್ಕಾಗಿ ಮೈತ್ರಿ ಸರ್ಕಾರದ ಜೊತೆ ಕೈಜೋಡಿಸಿ, ಸಂಸತ್ತಿಗೆ 20 ಶಾಸಕರನ್ನು ಗೆಲ್ಲಿಸಿ ಕರೆದೊಯ್ಯಲೇಬೇಕೆಂಬ ದೃಢ ನಿರ್ಧಾರದಿಂದ ಸಿದ್ದರಾಮಯ್ಯ ಮತ್ತು ನಾನು ಜೊತೆಯಾಗಿ ಪ್ರಚಾರಕೈಗೊಂಡಿದ್ದೇವೆ ಎಂದರು.
ಬಿಜೆಪಿ ಹಿರಿಯ ನಾಯಕ ಅಡ್ವಾಣಿಯನ್ನು ಮೋದಿ ಮೂಲೆ ಗುಂಪು ಮಾಡಿದ್ದಾರೆ. ದೇಶದಲ್ಲಿ ರಾಜಧರ್ಮ ಪಾಲಿಸುತ್ತಿಲ್ಲ, ಕೋಮುವಾದಿ ಸೃಷ್ಟಿಯಾಗುತ್ತಿದೆ, ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ, ರೈತರಿಗೆ ಸಬ್ಸಿಡಿ ದರದಲ್ಲಿ ಏನು ನೀಡಿಲ್ಲ. ಬರೀ ಭ್ರಷ್ಟಾಚಾರ ತುಂಬಿದೆ. ನೋಟ್ ಬ್ಯಾನ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ವಿದೇಶದಿಂದ ಕಪ್ಪು ಹಣ ತರಿಸುತ್ತೇವೆ ಎಂದು ಹೇಳಿದವರು ಅದು ಈಗ ಏನಾಗಿದೆ ಎಂದು ಪ್ರಶ್ನಿಸಿದರು.
ನಾನು ಕೆಲವು ತಿಂಗಳು ಪ್ರಧಾನಿಯಾಗಿದ್ದಾಗ ಉತ್ತಮ ಆಡಳಿತ ನೀಡಿದ್ದೇನೆ. ದೇಶಕ್ಕಾಗಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ವಿವಾದಿತ ರಾಜ್ಯಗಳಾದ 7 ರಾಜ್ಯಗಳಿಗೆ ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿ ಬಂದಿದ್ದೇನೆ. ನಾನು ಹೋರಾಟಗಾರನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಸೋತಾಗಲೂ ನಾನು ಸಂಸತ್ತಿನಲ್ಲಿ ರೈತರ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜಾತ್ಯತೀತವಾಗಿ ಮಹಿಳೆಯರಿಗೆ ನಮ್ಮ ಪಕ್ಷದಲ್ಲಿ ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಲ್ಲಿ ಉತ್ತಮ ಸ್ಥಾನ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥ್, ಡಾ.ಕೆ.ಅನ್ನದಾನಿ, ಬಿ.ಎಂ ಫಾರಾಕ್, ಮರೀತಿಬ್ಬೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.