ಗುಂಡ್ಲುಪೇಟೆ: ತಾಲೂಕಿನ ತಗ್ಗಲೂರು ಗ್ರಾಮದಲ್ಲಿ ರೈತರ ನಿದ್ರೆಗೆಡಿಸಿದ್ದ ಚಿರತೆಯನ್ನು ಕೊನೆಗೂ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ನಿರಂತರವಾಗಿ ಕಾಣಿಸಿಕೊಂಡು ನಾಯಿಯನ್ನು ಬೇಟೆಯಾಡುತ್ತಾ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಚಿರತೆಯ ಸೆರೆಗೆ ಬೋನು ಇರಿಸಿ ನಾಯಿಯನ್ನು ಕಟ್ಟಲಾಗಿತ್ತು.
ರಾತ್ರಿ ನಾಯಿಯನ್ನು ತಿನ್ನಲು ಬಂದ ಒಂದೂವರೆ ವರ್ಷದ ಹೆಣ್ಣು ಚಿರತೆಯು ಬೋನಿನಲ್ಲಿ ಸೆರೆ ಸಿಕ್ಕಿದೆ. ಬೋನಿನೊಳಗೆ ಸಿಲುಕಿದ ಚಿರತೆ ಚೀರಾಡಿದ್ದು, ಅದರ ಆರ್ಭಟವನ್ನು ಕೇಳಿದ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಮೂಲೆಹೊಳೆ ಅರಣ್ಯಪ್ರದೇಶಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಡೀಪುರ ಹುಲಿಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್, ಎಸಿಎಫ್ ಅಂಥೋನಿ ಮರಿಯಪ್ಪ, ವಲಯಾರಣ್ಯಾಧಿಕಾರಿ ಜಿ.ಕೆ.ಮುಕುಂದ, ಸಿಬ್ಬಂದಿ ದಿಲೀಪ್ ಹಾಗೂ ಇತರರು ಇದ್ದರು.