ಕುಂದಾಪುರ: ಬಳ್ಳಾರಿ ಮೂಲದ ಮುಸ್ಲಿಂ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಪ್ರತಿ ವರ್ಷ ಚಂಡಿಕಾ ಹೋಮ ನೆರೆವೇರಿಸಿಕೊಂಡು ಬಂದಿದ್ದು ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದ್ದಾರೆ.
ಬಳ್ಳಾರಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಎಚ್. ಇಬ್ರಾಹಿಂ, ಸಾಜುದ್ದೀನ್ ಹಾಗೂ ಜರೀನಾ ಅವರ ಕುಟುಂಬಸ್ಥರು ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಬಂದು ತಾಯಿ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ನಡೆಸುತ್ತಿದ್ದಾರೆ. ಈಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್ ಹಾಗೂ ಪತ್ನಿಯೂ ವರ್ಷಕ್ಕೊಮ್ಮೆ ಚಂಡಿಕಾಹೋಮ ಮಾಡಿಸುತ್ತಿದ್ದು, ಧರ್ಮ ಸಾಮರಸ್ಯಕ್ಕೆ ದೊಡ್ಡ ನಿದರ್ಶನವಾಗಿ ನಿಂತಿದ್ದಾರೆ.
ಎಲ್ಲಾ ದೇವರು ಒಂದೇ ಎನ್ನುವ ಮನ್ಸೂರ್, ಹಿರಿಯರು ಮಾಡಿಕೊಂಡು ಬಂದ ಸೇವೆ ಹಾಗೂ ತಾಯಿ ಮೂಕಾಂಬಿಕೆಯ ಅನುಗ್ರಹದಿಂದ ಜೀವನದಲ್ಲಿ ಏಳಿಗೆ ಹೊಂದಿದ್ದೇನೆ ಎನ್ನುತ್ತಾರೆ. ಮನ್ಸೂರ್ ಹಾಗೂ ಅವರ ಪತ್ನಿ, ಮಕ್ಕಳು ಐದು ವರ್ಷಗಳಿಂದ ವರ್ಷಕ್ಕೊಮ್ಮೆ ಕೊಲ್ಲೂರಿಗೆ ಬಂದು ದೇವಿಯ ದರ್ಶನ ಪಡೆದು ಚಂಡಿಕಾಹೋಮ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನ್ಸೂರ್, ಮೂಕಾಂಬಿಕೆಯ ಸನ್ನಿಧಿಯಲ್ಲಿ ಪೂಜೆ, ಚಂಡಿಕಾಹೋಮ ನಡೆಸುವುದರಿಂದ ನಮಗೆ ಆತ್ಮಸಂತೃಪ್ತಿ ಲಭಿಸುತ್ತದೆ. ಅಷ್ಟಕ್ಕೂ ಎಲ್ಲಾ ದೇವರು ಒಂದೇ. ಅಮ್ಮನ ಅನುಗ್ರಹದಿಂದ ನಾವು ಸಂತೃಪ್ತಿಯ ಜೀವನ ನಡೆಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ವಿಶೇಷವಾದ ಶಕ್ತಿಯಿದೆ ಎಂದು ಹೇಳಿದ್ದಾರೆ.