ಕಾರವಾರ: ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಜಲಪಾತಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಯಲ್ಲಾಪುರದ ಬಾಸಲ್ ಸಮೀಪದ ಕಾನೂರು ಜಲಪಾತದಲ್ಲಿ ಸಂಭವಿಸಿದ್ದು ಮಂಗಳವಾರ ಶವ ಪತ್ತೆಯಾಗಿದೆ.
ಯಲ್ಲಾಪುರದ ತಾಲೂಕಿನ ಮಾವಿನಮನೆ ಗ್ರಾ.ಪಂ. ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ ಯಲ್ಲಾಪುರದ ಕಾಳಮ್ಮನಗರ ನಿವಾಸಿ ಕಿಗನ್ ಫರ್ನಾಂಡಿಸ್ (21), ಗಣಪತಿಗಲ್ಲಿ ನಿವಾಸಿ ಸಿಲ್ವನ್ ಲಾರೆನ್ಸ್ ಫರ್ನಾಂಡಿಸ್(17) ಜಲಪಾತದಲ್ಲಿ ಮುಳುಗಿ ಮೃತಪಟ್ಟ ಯುವಕರು.
ಯಲ್ಲಾಪುರ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಇವರು, ನಾಲ್ವರು ಸ್ನೇಹಿತರ ಜತೆ ಜಲಪಾತ ವೀಕ್ಷಣೆಗೆ ಸೋಮವಾರ ತೆರಳಿದ್ದರು ಎನ್ನಲಾಗಿದೆ. ಮಕ್ಕಳು ಮನೆಗೆ ಬಾರದ ಕಾರಣ ಪಾಲಕರು ಯಲ್ಲಾಪುರ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಶೋಧ ಕಾರ್ಯದ ಬಳಿಕ ಕಾನೂರು ಫಾನ್ಸ್ ನಲ್ಲಿ ಯುವಕರ ಶವ ಪತ್ತೆಯಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.