ಕಾರವಾರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಲು ಬಂಡೆಗಲ್ಲು ತೆರವಿಗಾಗಿ ಅವೈಜ್ಞಾನಿಕವಾಗಿ ಸ್ಪೋಟಕ ಬಳಸುವುದನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಪಂಚಾಯತ್ ವ್ಯಾಪ್ತಿಯ ತಂಡ್ರಕುಳಿಯ ಜನರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಸಿಡಿಮದ್ದನ್ನು ಸ್ಟೋಟಿಸುವುದರಿಂದ ಸ್ಥಳೀಯರ ಮನೆ, ಶಾಲೆ, ಅಂಗನವಾಡಿಗಳ ಮೇಲೆ ಭಾರೀ ಗಾತ್ರದ ಕಲ್ಲುಗಳು ಬೀಳುವುದರಿಂದ ಸ್ಥಳೀಯರು ಜೀವಭಯ ಸೃಷ್ಟಿಯಾಗಿದೆ. ಸಿಡಿದ ಕಲ್ಲುಗಳು ಸೂರನ್ನು ಒಡೆದುಕೊಂಡು ಒಳಗೆ ಬಿದ್ದರೂ ಅದೃಷ್ಟವಶಾತ್ ಯಾರಿಗೂ ಜೀವ ಹಾನಿಯಾಗಿಲ್ಲ.
ಸ್ಥಳೀಯರಾದ ರಾಘವೇಂದ್ರ ಅಪ್ಪಯ್ಯ ಅಂಬಿಗ ಎಂಬುವವರ ಮನೆಯ ಕೋಣೆಯೊಳಗೆ ಮಕ್ಕಳು ಮಲಗಿದ್ದ ಹಾಸಿಗೆಯ ಪಕ್ಷವೇ ದೊಡ್ಡ ಕಲ್ಲು ಬಿದ್ದಿದ್ದು, ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಶಾಲೆಯ ಹಂಚುಗಳನ್ನು ಪುಡಿಗಟ್ಟೆ ಒಳಗೆ ಕಲ್ಲುಗಳು ಬಿದ್ದಿದ್ದು, ಒಂದೊಮ್ಮೆ ಕೊಠಡಿಯಲ್ಲಿ ಮಕ್ಕಳು ಇದ್ದಿದ್ದರೆ ಏನಾಗಬಹುದಿತ್ತು ಎಂದು ಜನ ಪ್ರಶ್ನಿಸಿದ್ದಾರೆ. ಒಟ್ಟಾರೆ ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಗುಡ್ಡ ಕುಸಿದು ಉಂಟಾಗಿದ್ದ ಭಾರೀ ಅನಾಹುತವನ್ನು ಪುನಃ ನೆನಪಿಸುವಂತೆ ಮಾಡಿದೆ. ತಕ್ಷಣ ಸಂಘಟಿತರಾದ ಗ್ರಾಮಸ್ಥರು ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್ಬಿಯವರು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸುವುದನ್ನು ವಿರೋಧಿಸಿ ಪ್ರತಿಭಟಿಸಿದರು.
ಎರಡು ತಾಸುಗಳಾದರೂ ಐಆರ್ಬಿ ಅಥವಾ ಸರ್ಕಾರದ ಯಾವ ಅಧಿಕಾರಿಯೂ ಸ್ಥಳಕ್ಕೆ ಬಾರದೇ ಇರುವುದು ಜನರ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಸಿಪಿಐ ಸಂತೋಷ ಶೆಟ್ಟಿ, ತಹಸೀಲ್ದಾರ್ ಪಿ. ಕೆ. ದೇಶಪಾಂಡೆ, ಪಿಎಸೈ ಸಂಪತ್ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದರು. ಸ್ಫೋಟದಿಂದ ನೂರಾರು ಮೀಟರು ದೂರಕ್ಕೆ ಸಿಡಿದ ದೊಡ್ಡ ಕಲ್ಲುಗಳು ಉಂಟುಮಾಡಿದ ಹಾನಿಯನ್ನು ಪರಿಶೀಲನೆ ನಡೆಸಿದರು. ಶೀಘ್ರವೇ ಐಆರ್ಬಿಯವರು ಹಾನಿಗೆ ಪರಿಹಾರ ನೀಡಬೇಕು. ಅಲ್ಲದೆ ಈ ರೀತಿ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.