ಮಡಿಕೇರಿ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸದಸ್ಯತ್ವವನ್ನು ರದ್ದುಪಡಿಸುವಂತೆ ಒತ್ತಾಯಿಸಿರುವ ಕೆಪಿಸಿಸಿ ಮಾಹಿತಿ ಹಕ್ಕು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಅಕ್ರಮ ಹಣ ಸಂಪಾದನೆಯ ಆರೋಪದ ಬಗ್ಗೆ ಪೊನ್ನಣ್ಣ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಶಿವಕುಮಾರ್ ಅವರ ಶಾಸಕ ಸ್ಥಾನವನ್ನೂ ರದ್ದುಪಡಿಸಲು ಒತ್ತಾಯಿಸುತ್ತಾರೆಯೇ ಎಂದು ಪ್ರಶ್ನಿಸಿರುವ ಮಹೇಶ್ ಜೈನಿ, ಆರೋಪ ಸಾಬೀತಾದರಷ್ಟೇ ಆರೋಪಿ ಅಪರಾಧಿಯಾಗತ್ತಾರೆ, ಕಾನೂನಿನ ಬಗ್ಗೆ ಅರಿವಿರುವ ಕಾನೂನು ಘಟಕದ ಅಧ್ಯಕ್ಷರಿಗೆ ನಾವು ನೆನಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಅವರಿಬ್ಬರಿಗೂ ಕಾನೂನು ಒಂದೇ ಆಗಿದೆ, ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.
ಪೊಲೀಸ್ ಕಮೀಷನರ್ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯಲು ಸಾಧ್ಯವಿಲ್ಲವೆಂದು ಪೊನ್ನಣ್ಣ ಅವರು ಹೇಳಿಕೆ ನೀಡಿದ್ದಾರೆ. ಆದರೆ ಈ ದಂಧೆ ಇಂದು, ನಿನ್ನೆಯದಲ್ಲ ಎನ್ನುವುದು ಬಂಧಿತರ ತನಿಖೆಯಿಂದ ತಿಳಿದು ಬಂದಿದೆ.
ಬಿಜೆಪಿ ನೇತೃತ್ವದ ಸರ್ಕಾರ ನಿಷ್ಠಾವಂತ ಅಧಿಕಾರಿಗಳ ತಂಡದ ಮೂಲಕ ಡ್ರಗ್ಸ್ ಪ್ರಕರಣಗಳನ್ನು ಬೆಳಕಿಗೆ ತಂದು, ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಬೇರು ಬಿಟ್ಟಿದ್ದ ದಂಧೆಯನ್ನು ನಾಶ ಮಾಡಲು ಪಣತೊಟ್ಟಿದೆ. ಈ ಹಿಂದೆ ಭ್ರಷ್ಟ ಅಧಿಕಾರಿಗಳ ನೆರವಿನಿಂದ ನಡೆಯುತ್ತಿದ್ದ ದಂಧೆಗೆ ಸರ್ಕಾರ ಕಡಿವಾಣ ಹಾಕಿದ್ದು, ಪ್ರಕರಣವನ್ನು ಬೇಧಿಸಿರುವ ದಕ್ಷ ಅಧಿಕಾರಿಗಳ ಪ್ರಯತ್ನ ಪ್ರಶಂಸನೀಯವೆಂದು ಮಹೇಶ್ ಜೈನಿ ತಿಳಿಸಿದ್ದಾರೆ.