ಮಡಿಕೇರಿ: ಕೊಡಗಿನ ರಸ್ತೆಗಳು ಕುಸಿದು, ಕಂದಕ ಸೃಷ್ಠಿಯಾಗಿ ವಾಹನಗಳೇ ಸಂಚರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಲು ಮಹಾಮಳೆ ಮಾತ್ರವಲ್ಲದೆ ಭಾರೀ ವಾಹನಗಳ ಸಂಚಾರವೂ ಕಾರಣ ಎಂದರೆ ತಪ್ಪಾಗಲಾರದು.
ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾದರೆ ಭಾರೀ ವಾಹನಗಳು ಕೊಡಗಿನ ಮೂಲಕವೇ ಸಂಚರಿಸುತ್ತವೆ. ಹೀಗಾಗಿ ಇಲ್ಲಿ ರಸ್ತೆಗಳು ಹದಗೆಡಲು ಕಾರಣವಾಗಿದೆ. ಜತೆಗೆ ಜಿಲ್ಲೆಗೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಬಳಸುವುದರಿಂದ ಇದೆಲ್ಲವನ್ನು ಮೀರಿ ಮರಳು, ಜಲ್ಲಿಕಲ್ಲು ಮೊದಲಾದವುಗಳನ್ನು ಹೊತ್ತು ಲಾರಿ, ಟಿಪ್ಪರ್, ಟ್ರಕ್ಗಳು ತೆರಳುವುದರಿಂದಾಗಿ ರಸ್ತೆಗಳು ಹಾಳಾಗುತ್ತಿವೆ.
ಮೊದಲೇ ರಸ್ತೆಗಳು ಹದಗೆಟ್ಟಿದ್ದವು. ಇದೇ ಸಂದರ್ಭದಲ್ಲಿ ಭಾರೀ ಮಳೆ ಸುರಿದು, ಪ್ರವಾಹ, ಬರೆಕುಸಿತ ಹೀಗೆ ಹಲವು ತೊಂದರೆಗಳು ಏಕ ಕಾಲದಲ್ಲಿ ಅಪ್ಪಳಿಸಿದ್ದರಿಂದ ಜಿಲ್ಲೆಯ ಮುಖ್ಯ ರಸ್ತೆಗಳು ಮಾತ್ರವಲ್ಲದೆ, ಎಲ್ಲ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಇವುಗಳನ್ನು ಅಭಿವೃದ್ಧಿಗೊಳಿಸಿ ಮತ್ತೆ ಮೊದಲಿನಂತೆ ಮಾಡುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ.
ಜಿಲ್ಲೆಯ ಹೆಚ್ಚಿನ ರಸ್ತೆಗಳಲ್ಲಿ ಮರಳು ಲಾರಿಗಳೇ ಹೆಚ್ಚಾಗಿ ಸಂಚರಿಸುತ್ತಿದ್ದು ಇದರಿಂದ ರಸ್ತೆಗಳಿಗೆ ಹಾನಿಯಾಗುತ್ತಿವೆ.
ಇದೆಲ್ಲವನ್ನು ಗಮನಿಸಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾರವರು ಕೊಡಗು ಜಿಲ್ಲೆಯಾದ್ಯಂತ ಜೂನ್ 2018 ರಿಂದ ಡಿಸೆಂಬರ್ 2018ರ ಅಂತ್ಯದವರೆಗೆ ಮರಳುಗಾರಿಕೆಯನ್ನು ನಿರ್ಬಂಧಿಸಿದ್ದು, ಜಿಲ್ಲೆಯ ರಸ್ತೆಗಳ ಮುಖಾಂತರ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುತ್ತಿರುವುದರಿಂದ ಮತ್ತು ಭೂಕುಸಿತದಿಂದಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿವೆ. ಇಲ್ಲಿನ ರಸ್ತೆಗಳು ಸಾಮಾನ್ಯವಾಗಿ ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳು ಭಾರ ತಡೆಯುವ ಕ್ಷಮತೆ ಕ್ಷೀಣಿಸಿದೆ. ಜತೆಗೆ ಈ ವ್ಯಾಪ್ತಿಯಲ್ಲಿ ಮರದ ದಿಮ್ಮಿಗಳನ್ನು ಸಾಗಿಸುವ ಲಾರಿಗಳು ರಸ್ತೆಯ ಶೋಲ್ಡರ್ ಗಳನ್ನು ಹಾನಿ ಮಾಡುತ್ತಿದ್ದು, ಸಾರ್ವಜನಿಕ ವಾಹನ ಸಂಚಾರಕ್ಕೆ ಧಕ್ಕೆ ತರುತ್ತಿದೆ.
ಇದೆಲ್ಲವನ್ನು ಮನಗಂಡು ಪ್ರಯಾಣಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಗಳ ರಕ್ಷಣೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆಯನ್ನು ಅಕ್ಟೋಬರ್ 29ರವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.