ಮಂಡ್ಯ: ಒಂದೆಡೆ ಸರ್ಕಾರ ಉಪಚುನಾವಣೆಯ ಗುಂಗಿನಲ್ಲಿದ್ದರೆ ಮತ್ತೊಂದೆಡೆ ರೈತರು ಮಾಡಿಕೊಂಡ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಕೆಲವು ಸಮಯಗಳಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ನಡೆಯುತ್ತಿದ್ದು, ಶನಿವಾರ ಸಾಲದಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೀರುವಳ್ಳಿ ಗ್ರಾಮದಿಂದ ವರದಿಯಾಗಿದೆ.
ಗ್ರಾಮದ ದಿವಂಗತ ಕಾಳೇಗೌಡ ಅವರ ಪುತ್ರ ಬಿ.ಕೆ.ಸುರೇಶ್(50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಬೀರುವಳ್ಳಿ ಗ್ರಾಮದಲ್ಲಿ ಸುಮಾರು 3ಎಕರೆ ಜಮೀನು ಹೊಂದಿದ್ದು, ಕೃಷಿಗಾಗಿ ಮಂದಗೆರೆ ವಿಜಯ ಬ್ಯಾಂಕಿನಲ್ಲಿ ಸುಮಾರು 1ಲಕ್ಷ ರೂ ಬೆಳೆ ಸಾಲ, ಜೊತೆಗೆ ಲಕ್ಷಾಂತರ ರೂ ಕೈಸಾಲ ಮಾಡಿಕೊಂಡಿದ್ದರು. ಬ್ಯಾಂಕಿನವರು ಸಾಲ ವಸೂಲಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ನೋಟೀಸ್ ಜಾರಿ ಮಾಡಿದ್ದರಿಂದ ಮನನೊಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ಅವರ ಪತ್ನಿ ಮಂಜುಳಾ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಕ್ಕಿಹೆಬ್ಬಾಳು ನಾಡ ಕಚೇರಿಯ ಉಪತಹಸೀಲ್ದಾರ್ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್ ಕುಮಾರ್, ಸಬ್ಇನ್ಸ್ಪೆಕ್ಟರ್ ಗಿರೀಶ್, ಎ.ಎಸ್.ಐ.ಪ್ರಮೋದ್ ಭೆೇಟಿ ನೀಡಿ ಪರಿಶೀಲನೆ ನಡೆಸಿದರು.