ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಅಮೃತಾಪುರ ಹೋಬಳಿಗೆ ಸೇರಿರುವ ಕುಡ್ಲೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಭಾರತೀಯ ಕಿಸನ್ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಶಿವಕುಮಾರ್ ಮಾಳಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕುಡ್ಲೂರು ಅಭಿವೃದ್ಧಿ ಗ್ರಾಮವಾಗಿದ್ದು, ಜಿಪಂ ಹಾಗೂ ತಾಪಂ ಮುಖ್ಯ ಕ್ಷೇತ್ರವಾಗಿದೆ. ಪಕ್ಕದ ಕೊಟಗೆರೆ ಗ್ರಾಪಂ ಅಜ್ಜಂಪುರ ಹೋಬಳಿಗೆ ಸೇರಿದೆ. ಕುಡ್ಲೂರು ಮತ್ತು ಕೊರಟಗೆರೆ ಈ ಎರಡು ಕ್ಷೇತ್ರವು ಈ ತನಕ ಸರಕಾರಿ ಸವಲತ್ತುಗಳಿಂದ ವಂಚಿತವಾಗಿತ್ತು ಎಂದು ತಿಳಿಸಿದ್ದಾರೆ.
ಕುಡ್ಲೂರು ಪಂಚಾಯತ್ ಕುಡ್ಲೂರು, ಪುಂಡನಹಳ್ಳಿ, ಶಿವಪುರ, ಮುಂಡ್ರೆ, ಹಟ್ಟಿತಾಂಡ್ಯಾ ಹಾಗೂ ಕೊರಟಗೆರೆ ಗ್ರಾಪಂ ಸೇರಿದ ಕೊರಟಗೆರೆ, ನಾಗಮಂಗಲ, ವೀರಾಪುರ, ಹೊಸೂರು, ಸೋಮೇನಹಳ್ಳಿ ರೈತರು ಬೇಸರಗೊಂಡಿದ್ದಾರೆ. ನೂತನವಾಗಿ ಅಜ್ಜಂಪುರ ತಾಲೂಕು ರಚನೆ ಇರುವ ಹಿನ್ನೆಲೆಯಲ್ಲಿ ಕುಡ್ಲೂರು ಗ್ರಾಮಕ್ಕೆ ಸುತ್ತಮುತ್ತಲ ಹಳ್ಳಿಗಳನ್ನು ಸೇರಿಸಿ ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಅವರು ಆಗ್ರಹಿಸಿದ್ದಾರೆ.