ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಗತ್ಯವಲ್ಲದೆ ಇರುವ ಪಂಪ್ ಹಾಕುವುದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.
ಮಂಜೇಶ್ವರ, ಕಾಸರಗೋಡು ಬ್ಲಾಕ್ ಗಳ ಉಪ್ಪಳ, ಶಿರಿಯ, ಮೊಗ್ರಾಲ್ ಪುತ್ತೂರು ಪ್ರದೇಶಗಳಲ್ಲಿ ನದಿಗಳಿಂದ ಕುಡಿಯುವ ನೀರನ್ನು ಪಂಪ್ ಮಾಡುವ ಪ್ರದೇಶಗಳಲ್ಲಿ ಕೆಳಗಡೆ ಮತ್ತು ಮೇಲ್ಗಡೆಗೆ 500 ಮೀಟರ್ ದೂರದಲ್ಲಿ ಪಂಪಿಂಗ್ ಗಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದನ್ನು ದುರ್ಬಳಕೆ ಮಾಡಿದರೆ ಸಂಪರ್ಕ ಕಡಿತಗೊಳಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಕೃಷಿ ಅಗತ್ಯಕ್ಕೆ ನಡೆಸುವ ನೀರಿನ ಪಂಪಿಂಗ್ ವ್ಯಾಪಕವಾಗಿ ದುರ್ಬಳಕೆಗೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬರ ಇನ್ನೂ ಹೆಚ್ಚಳಗೊಳ್ಳುವ ಭೀತಿಯಿದ್ದು, ಜಲ ದುರುಪಯೋಗ ಮಾಡದಂತೆ ಸೂಚನೆ ನೀಡಿದ್ದಾರೆ.