ಕಾಸರಗೋಡು: ಸೇತುವೆ ಉದ್ಘಾಟನೆಗೆ ಹಾಕಲಾಗಿದ್ದ ಕಮಾನಿನಲ್ಲಿನ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಭಾವಚಿತ್ರಕ್ಕೆ ಬಣ್ಣ ಬಳಿದ ಘಟನೆ ಪೆರಿಯದಲ್ಲಿ ನಡೆದಿದ್ದು, ರಾಜಕೀಯ ವಿರೋಧಿಗಳು ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ.
ರಾಜ್ಯದ ಅತೀ ಎತ್ತರ ಸೇತುವೆಯಾಗಿರುವ ಆಯಂಕದವು ಸೇತುವೆಯ ಲೋಕಾರ್ಪಣೆ ಡಿ. 8ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ರಾಜ್ಯದ ಸಚಿವರು, ಸ್ಥಳೀಯ ಶಾಸಕರ ಭಾವಚಿತ್ರವನ್ನು ಒಳಗೊಂಡ ಕಮಾನು ಹಾಕಲಾಗಿತ್ತು.
ಆದರೆ ಕಾಂಗ್ರೆಸ್ ಸಂಸದರಾಗಿರುವ ರಾಜ್ ಮೋಹನ್ ಉಣ್ಣಿತ್ತಾನ್ ಭಾವಚಿತ್ರಕ್ಕೆ ಬಣ್ಣ ಹಚ್ಚಿ ವಿಕ್ರತಗೊಳಿಸಿದ್ದು, ಈ ಬಗ್ಗೆ ಆಕ್ರೋಶ ಕೇಳಿಬರುತ್ತಿದೆ.
ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ನನ್ನ ಭಾವಚಿತ್ರಕ್ಕೆ ಹಾನಿ ಎಸಗಿದರೂ ಜನರ ಮನಸ್ಸಿನಿಂದ ನನ್ನನ್ನು ದೂರ ಮಾಡಲು ಯಾವ ರಾಜಕೀಯ ವಿರೋಧಿಗಳಿಗೂ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.