ಕಾಸರಗೋಡು: ನಗರ ಹೊರವಲಯದ ಅಣಂಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಸರಣಿ ಅಪಘಾತದಲ್ಲಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಅಡುಗೆ ಅನಿಲ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಕಾರು ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿದ ಲಾರಿ ಆಟೋ ರಿಕ್ಷಾ ಮತ್ತು ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.
ಕಾಞ೦ಗಾಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ತುಂಬಿದ ಲಾರಿ ಮತ್ತು ಕಾಸರಗೋಡಿನಿಂದ ವಿದ್ಯಾನಗರದತ್ತ ತೆರಳುತ್ತಿದ್ದ ಕಾರು ನಡುವೆ ಅಪಘಾತ ನಡೆದಿದ್ದು, ಬಳಿಕ ಚಾಲಕನ ನಿಯಂತ್ರಣ ತಪ್ಪಿ ಆಟೋ ಮತ್ತು ಶೋ ರೂಂ ಮುಂಭಾಗದಲ್ಲಿ ನಿಲುಗಡೆಗೊಳಿಸಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಕರ್ನಾಟಕ ಪುತ್ತೂರಿನ ರಾಜು, ಕಾರು ಚಾಲಕ ಪಡುವಡ್ಕದ ನಿಜಾಮುದ್ದೀನ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಲಾರಿಯಲ್ಲಿ ಅನಿಲ ರಹಿತ ಸಿಲಿಂಡರ್ ಮಾತ್ರ ಇದ್ದುದರಿಂದ ಭಾರೀ ದುರಂತ ತಪ್ಪಿದೆ ಎನ್ನಬಹುದು. ಘಟನಾ ಸ್ಥಳಕ್ಕೆ ಕಾಸರಗೋಡು ನಗರ ಠಾಣಾ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ, ಸ್ಥಳೀಯರು ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ತಲಪಿಸಿದರು.