ಮೈಸೂರು: ಕಾಸರಗೋಡು ಭಾಗದ ಹಳ್ಳಿಗಳ ಹೆಸರನ್ನು ಬದಲಾವಣೆ ಮಾಡುತ್ತಿರುವ ವಿಚಾರದಲ್ಲಿ ಕೇರಳ ಸರ್ಕಾರದ ಮೇಲೆ ನಾವು ಒತ್ತಡ ಹೇರಬೇಕಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಕನ್ನಡವನ್ನು ಸಂಪೂರ್ಣ ನಿರ್ನಾಮ ಮಾಡಲು ಅಲ್ಲಿನ ಕಮ್ಯೂನಿಸ್ಟ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿದರು. ಈ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ರಾಜಕೀಯ ಪಕ್ಷದ ಮುಖಂಡರು ಧ್ವನಿ ಎತ್ತಬೇಕಾಗಿದೆ. ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ಜೊತೆ ಮಾತುಕತೆ ನಡೆಸಬೇಕು ಎಂದರು.ಕಾಸರಗೋಡು ಕರ್ನಾಟಕದ ಭಾಗ ಇಷ್ಟು ವರ್ಷಗಳ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆಯುತ್ತಿತ್ತು. ಆದರೆ ಈಗ ಕೇರಳ ಸರ್ಕಾರ ಕಾಸರಗೋಡು ಭಾಗದಲ್ಲಿ ಕನ್ನಡವನ್ನು ನಾಶ ಮಾಡಲು ಹೊರಟಿದೆ. ಇದರ ವಿರುದ್ಧ ಸ್ವಾಭಿಮಾನಿ ಕನ್ನಡಿಗರು ಈಗ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.ಲಸಿಕಾ ಉತ್ಸವದಲ್ಲಿ ಪ್ರಧಾನಿ ಹಾಗೂ ಸಿಎಂ ಫೋಟೋ ಹಾಕುವುದು ವಾಡಿಕೆ. ಆದರೆ ಪಕ್ಷದ ಚಿಹ್ನೆ ಹಾಕಬಾರದು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಉಪ್ಪು, ಸಕ್ಕರೆ ಪ್ಯಾಕೇಟ್ ಗಳ ಮೇಲೂ ಸಿದ್ದರಾಮಯ್ಯ ಫೋಟೋ ಹಾಕಿದ್ದರು ಎಂದು ತಿರುಗೇಟು ನೀಡಿದರು.