ಕಾರವಾರ: ದುಡಿದ ಹಣದಲ್ಲಿ ಪಾಲು ಕೊಡುತ್ತಿಲ್ಲ ಎಂಬ ಸಿಟ್ಟಿಗೆ ಮಗನನ್ನೇ ಕೊಲೆ ಮಾಡಿದ್ದ ತಂದೆಗೆ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ .
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡಾದ ಸೀಬರ್ಡ್ ಕಾಲೋನಿಯಲ್ಲಿ 2017ರ ಜೂ. 25 ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ.
ಪಾಂಡುರಂಗ ನಾರಾಯಣ ಹರಿಕಂತ್ರ ಎನ್ನುವ ವ್ಯಕ್ತಿ ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ತನ್ನ ಮಗ ವಿನೋದ ಎಂಬಾತನ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದ . ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಾಂಡುರಂಗನನ್ನು ಬಂಧಿಸಲಾಗಿತ್ತು ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಾರಾಯಣರವರು ಆಪಾದಿತ ಪಾಂಡುರಂಗನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ .
ಹಾರವಾಡದ ಸೀಬರ್ಡ್ ಹಾರವಾಡದ ಕಾಲೊನಿಯ ಪಾಂಡುರಂಗ ನಾರಾಯಣ ಹರಿಕಂತ್ರ ಎಂಬಾತ ತನ್ನ ಮಗ ವಿನೋದನ ಮೇಲೆ ಆಗಾಗ ಸಿಟ್ಟು ಮಾಡುತ್ತಿದ್ದ. ಮಲ್ಪೆಯಲ್ಲಿ ಮೀನುಗಾರಿಕಾ ಬೋಟಿನಲ್ಲಿ ದುಡಿಯುತ್ತಿದ್ದ ವಿನೋದ್ ತನ್ನ ದುಡಿಮೆಯ ಪಾಲನ್ನು ತನ್ನ ಖರ್ಚಿಗೆ ಕೊಡುತ್ತಿಲ್ಲ ಎನ್ನುವುದು ತಂದೆಯ ಕೋಪಕ್ಕೆ ಕಾರಣವಾಗಿತ್ತು. ಅನೇಕ ಬಾರಿ ಈ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಜಗಳವೂ ನಡೆದಿತ್ತು.
2017ರ ಜೂ . 25 ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವಿನೋದ್ನ ಮೇಲೆ ಕೋಪಗೊಂಡಿದ್ದ ತಂದೆ ಪಾಂಡುರಂಗ ದೊಡ್ಡಗಾತ್ರದ ಕಲ್ಲನ್ನು ಎತ್ತಿ ಹಾಕಿ ಸಾಯಿಸಿದ್ದ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಬಿ . ಹೊಸಪಟ್ಟಣ ವಾದ ಮಂಡಿಸಿದ್ದರು