ಮಡಿಕೇರಿ: ತೋಟಗಾರಿಕಾ ಇಲಾಖಾ ವತಿಯಿಂದ ಸಂತ್ರಸ್ತರಿಗಾಗಿ ವಿತರಿಸಲಾಗುವ ಕರಿಮೆಣಸು ಗಿಡಗಳನ್ನು ಆಯಾ ಪಂಚಾಯ್ತಿಗಳಿಂದ ನೀಡುವುದಕ್ಕೆ ಬದಲಾಗಿ, ನೇರವಾಗಿ ಅರ್ಹ ಸಂತ್ರಸ್ತ ರೈತರಿಗೆ ವಿತರಣೆ ಮಾಡುವಂತಾಗಬೇಕೆಂದು ಹಲವು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟ್ಟೆಮಾಡು ಗ್ರಾಮದ ರೈತ ಪೋತಂಡ್ರ ತೇಜಪ್ರಸಾದ್, ತೋಟಗಾರಿಕಾ ಇಲಾಖೆಯಿಂದ ಕೊಡಗಿನ ಸಂತ್ರಸ್ತ ರೈತರಿಗೆ ತಲಾ 200 ಕಾಳು ಮೆಣಸು ಗಿಡಗಳನ್ನು ಆಯಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿತರಣೆ ಮಾಡಲಾಗುವುದೆಂದು ಇತ್ತೀಚೆಗೆ ಪ್ರಕಟಿಸಲಾಗಿತ್ತು. ಈ ಬಗ್ಗೆ ಇಲಾಖೆಯನ್ನು ಸಂಪರ್ಕಿಸಿದಾಗ, ಸಂಬಂಧಿಸಿದ ಯೋಜನೆಯ ಅರ್ಜಿಗಳನ್ನು ಗ್ರಾಮ ಪಂಚಾಯ್ತಿಗಳಲ್ಲಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಆದರೆ, ಗ್ರಾಮ ಪಂಚಾಯ್ತಿಗಳಲ್ಲಿ ಕೇವಲ 10 ರಿಂದ 15 ಅರ್ಜಿಗಳು ಮಾತ್ರ ಲಭ್ಯವಿದ್ದು, ಅರ್ಹರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಕೃತಿಕ ವಿಕೋಪದ ಸಂತ್ರಸ್ತ ಗ್ರಾಮಗಳಾದ ಕಾಲೂರು, ದೇವಸ್ತೂರು, ಕೆ.ನಿಡುಗಣೆ, ಮಕ್ಕಂದೂರು, ಆವಂಡಿ, ಮುಕ್ಕೋಡ್ಲು ಗ್ರಾಮಗಳಿಗೂ ಜಿಲ್ಲೆಯ ಇತರ ಗ್ರಾಮಗಳಿಗೂ ಒಂದೇ ರೀತಿಯ ಮಾನದಂಡವನ್ನು ಇರಿಸಲಾಗಿದ್ದು, ಇದರಿಂದಾಗಿ ನೈಜ ಸಂತ್ರಸ್ತರಿಗೆ ಯೋಜನೆಯ ಸವಲತ್ತು ದೊರಕುವುದು ಕಷ್ಟ ಸಾಧ್ಯವಾಗಿದೆ. ಕಳೆದ ಬಾರಿಯ ವಿಕೋಪಕ್ಕೆ ತುತ್ತಾದ ಗ್ರಾಮಗಳ ಹೆಸರಿನಲ್ಲಿ ಅನೇಕ ರೀತಿಯ ವಂಚನೆಗಳು ಸರಕಾರದ ಮಟ್ಟದಿಂದಲೆ ಆಗುತ್ತಿದೆಯೆಂದು ಅವರು ಆರೋಪಿಸಿದರು.
ತೋಟಗಾರಿಕೆ ಇಲಾಖೆಯು ನೀಡಿರುವ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯ 90 ಸಾವಿರ ರೈತರ 8,689 ಹೆಕ್ಟೇರ್ ಪ್ರದೇಶಕ್ಕೆ ಪ್ರತಿ ರೈತರಿಗೆ ತಲಾ 200 ಗಿಡಗಳಂತೆ ಕರಿಮೆಣಸು ಗಿಡಗಳನ್ನು ಬೆಳೆಸಿರುವುದಾಗಿ ಹೇಳಲಾಗಿದೆ.ಆದರೆ, ಜಿಲ್ಲೆಯ 106 ಪಂಚಾಯ್ತಿಗಳಿಗೆ ತಲಾ 20 ಮಂದಿಗೆ 200 ಗಿಡಗಳಂತೆ ವಿತರಿಸಿದರು ಕೇವಲ 4 ಲಕ್ಷ ಗಿಡಗಳು ಮಾತ್ರ ವಿತರಣೆಯಾಗಲಿದ್ದು, ಉಳಿದ ಅಂದಾಜು 5 ಲಕ್ಷದಷ್ಟು ಗಿಡಗಳನ್ನು ಇಲಾಖೆ ಯಾವ ರೀತಿ ವಿತರಿಸಲಿದೆ ಎಂಬ ಮಾಹಿತಿಯನ್ನು ನೀಡುವಂತೆ ಆಗ್ರಹಿಸಿದರು.
ಪಂಚಾಯ್ತಿಗಳಿಗೆ ಅರಣ್ಯ ಇಲಾಖೆ ನೀಡಿದ ಕಾಡು ಮರದ ಸಸಿಗಳೆ ಇನ್ನೂ ಪಂಚಾಯ್ತಿ ಕಛೇರಿಗಳ ಮುಂದೆ ಒಣಗುತ್ತಿವೆ. ಜನಪ್ರತಿನಿಧಿಗಳ ಮೂಲಕ ಗಿಡಗಳನ್ನು ವಿತರಣೆ ಮಾಡಿದರೆ ಅರ್ಹ ಫಲಾನುಭವಿಗಳಿಗೆ ದೊರಕುವ ಬದಲು ಜನಪ್ರತಿನಿಧಿಗಳ ಆಪ್ತ ವಲಯಕ್ಕೆ ಮಾತ್ರ ದೊರಕುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಲ್ಲಿ ಸವಲತ್ತುಗಳನ್ನು ವಿತರಣೆ ಮಾಡುವ ರೀತಿಯಲ್ಲೆ ನೇರವಾಗಿ ರೈತರಿಂದ ಅರ್ಜಿಗಳನ್ನು ಪಡೆದು ಅವರುಗಳಿಗೆ ಪಂಚಾಯ್ತಿಯ ಶಿಫಾರಸು ಪತ್ರ ಪಡೆದು ವಿತರಿಸುವಂತಾಗಬೇಕು. ಈ ಸಾಲಿನಲ್ಲಿ ಬಾಕಿ ಉಳಿಯುವ ಕೃಷಿಕರಿಗೆ ಮುಂದಿನ ವರ್ಷಗಳಲ್ಲಿ ಸವಲತ್ತು ನೀಡುವಂತಾಗಬೇಕೆಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಟ್ಟೆಮಾಡಿನ ಕಟ್ಟೆಮನೆ ದೀಪು, ಬಾಣೆಗದ್ದೆ ಸುಜಿತ್, ದೇವಸ್ತೂರಿನ ಕುಕ್ಕೇರ ಲಕ್ಷ್ಮಣ ಹಾಗೂ ಕುಕ್ಕೇರ ಸಂತೋಷ್ ಉಪಸ್ಥಿತರಿದ್ದರು.