ಮಡಿಕೇರಿ: ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಿಲುಕಿ ಕಂಗಾಲಾಗಿರುವ ಕೊಡಗಿನ ಬೆಳೆಗಾರರು ಹಾಗೂ ಕೃಷಿಕರ ಎಲ್ಲಾ ರೀತಿಯ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಮಾದಾಪುರದ ಜಂಬೂರು ಗ್ರಾಮದಲ್ಲಿ ನಡೆದ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಹಾಗೂ ಇತರರು, ಬೆಳೆಗಾರರು ಹಾಗೂ ರೈತರ ಸಾಲ ಮನ್ನಾ ಸೌಲಭ್ಯಕ್ಕಾಗಿ ಸರಕಾರದ ನಿಬಂಧನೆಗಳ ಪ್ರಕಾರ ಹತ್ತು ಹಲವು ವಿವರಗಳನ್ನು ಒದಗಿಸಬೇಕಾಗುತ್ತದೆ. ಇದರಿಂದಾಗಿ ರಾಜ್ಯ ಸರಕಾರ ಘೋಷಿಸಿರುವ ಸಾಲ ಮನ್ನಾದಿಂದ ಜಿಲ್ಲೆಯ ಕೃಷಿಕ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗದು ಎಂದು ಗಮನಸೆಳೆಜಡಿu.
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜುಲೈ 10ಕ್ಕೆ ಅನುಗುಣವಾಗಿ 33 ಸಾವಿರ ಬೆಳೆಗಾರರು 486 ಕೋಟಿ ಬೆಳೆ ಸಾಲವನ್ನು ಹೊಂದಿಕೊಂಡಿದ್ದು, ಪ್ರಾಕೃತಿಕ ವಿಕೋಪದಿಂದ ಜಿಲ್ಲೆ ತತ್ತರಿಸಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಅದರಲ್ಲೂ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ 6 ಗ್ರಾಮ ಪಂಚಾಯ್ತಿಗಳ 30 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಕೃಷಿಕರ ಬೆಳೆ ಸಾಲ ಸೇರಿದಂತೆ ಎಲ್ಲಾ ವಿಧದ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕೆಂದರು.
ಮುಖ್ಯ ಮಂತ್ರಿಗಳಿಗೆ ಸಲ್ಲಿಸುವ ಮನವಿಯಲ್ಲಿ ಪ್ರಮುಖವಾಗಿ, ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಲ್ಲಿ ಸಂಪೂರ್ಣ ಸಾಲವನ್ನು (ದೀರ್ಘಾವಧಿ ಸಾಲ, ಮಧ್ಯಮಾವಧಿ ಸಾಲ, ಅಲ್ಪಾವಧಿ ಸಾಲ) ಮನ್ನಾ ಮಾಡಬೇಕು, ಭೂಮಿ ಕಳೆದುಕೊಂಡವರಿಗೆ ಅಷ್ಟೇ ಜಾಗ ಪೈಸಾರಿಯಲ್ಲಾದರೂ ಪರ್ಯಾಯವಾಗಿ ಸಿಗುವಂತಾಗಬೇಕು, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ದುಪ್ಪಟ್ಟು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈತರ ಬೆಳೆ ಸಾಲವನ್ನು ಮನ್ನಾ ಮಾಡಿ ಹೊಸ ಸಾಲವನ್ನು ಕೊಡುವಂತಾಗಬೇಕೆಂದು ಒತ್ತಾಯಿಸಲಾಗಿದೆ.
ಇದರೊಂದಿಗೆ ಜಿಲ್ಲೆಯ ಎಲ್ಲಾ ಕೃಷಿಗೆ ಸಂಬಂಧಿಸಿದಂತೆ ಈ ಬಾರಿ ಎಲ್ಲಾ ವಿಧದ ಬೆಳೆ ಸಾಲಗಳನ್ನು ಮನ್ನಾ ಮಾಡಿ ಹೊಸದಾಗಿ ನೀಡುವಂತಾಗಬೇಕು ಹಾಗೂ ದೀರ್ಘಾವಧಿ ಸಾಲದ ಕಂತನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವಂತೆ ಮಾಡಬೇಕು, ಸಾಲ ಮನ್ನಾ ಮಾಡುವಾಗ ಈ ವರ್ಷದ ಮಟ್ಟಿಗೆ ಕೊಡಗಿಗೆ ಯಾವುದೇ ಷರತ್ತುಗಳನ್ನು (ಆದಾಯ ತೆರಿಗೆ ಪಾವತಿಸಿದ ರೈತರು, ವೇತನ/ಪಿಂಚಣಿ ಪಡೆಯುವ ರೈತರು, ಇತರ ಅಡವು ಸಾಲಗಳನ್ನು ಹೊಂದಿರುವ ರೈತರು ಇತ್ಯಾದಿ) ವಿಧಿಸದೆ ಮಂಜೂರು ಮಾಡಬೇಕು, ಭೂಕುಸಿತದಿಂದ ಸ್ಥಳಾಂತರಗೊಂಡು ಬಾಡಿಗೆ ಮನೆಗಳಲ್ಲಿ ವಾಸಿಸುವ ರೈತರಿಗೆ ಸರಕಾರ ನೀಡಿರುವ ಆಶ್ವಾಸನೆಯಂತೆ ಮಾಸಿಕ 10 ಸಾವಿರ ರೂ. ಮೊತ್ತದ ಬಾಡಿಗೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಯೂನಿಯನ್ ನಿರ್ದೇಶಕರಾದ ಶ್ರೀ ಎನ್.ಎ. ರವಿಬಸಪ್ಪ, ಕೆ.ಎಂ. ತಮ್ಮಯ್ಯ, ಕನ್ನಂಡ ಸಂಪತ್ ಮತ್ತು ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.