ಧಾರವಾಡ: ಅದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲದೇ ಜನ ಪರದಾಟ ನಡೆಸಿದ್ದರು. ಆದರೆ, ಇನ್ನು ಆಸ್ಪತ್ರೆಯಿಲ್ಲದ ಕೊರಗು ದೂರವಾಗಲಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.
ಧಾರವಾಡದ ಹೊಸ ಗ್ರಾಮ ತೇಗೂರ. ಈ ಗ್ರಾಮ ಮತ್ತು ಅಕ್ಕಪಕ್ಕದ 12 ಹಳ್ಳಿಗಳಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಹೀಗಾಗಿ, ಇಲ್ಲಿನ ಜನರಿಗೆ ಏನಾದರೂ ಆದ್ರೆ ಧಾರವಾಡ ಪಟ್ಟಣ ಅಥವಾ ಬೆಳಗಾವಿಯ ಕಿತ್ತೂರಿಗೇ ಹೋಗಬೇಕಾದ ಪರಿಸ್ಥಿತಿ ಇದೆ.
ಈ ಬಗ್ಗೆ ಗ್ರಾಮದ ರುದ್ರಪ್ಪ ಗಾಣಿಗೇರ ಎಂಬ ಯುವಕ ಪ್ರಧಾನಿ ಮೋದಿ ಕಚೇರಿಗೆ ಮೇಲ್ ಮಾಡಿ ಸಮಸ್ಯೆ ಗಮನಕ್ಕೆ ತಂದಿದ್ದರು. ಮೇಲ್ ಸಿಕ್ಕ ತಕ್ಷಣ ಪ್ರಧಾನಿ ಮೋದಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಧಾರವಾಡ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹೊಸ ತೇಗೂರ ಗ್ರಾಮ ಪಂಚಾಯ್ತಿ ಕೂಡಾ ಆಸ್ಪತ್ರೆಗಾಗಿ ಜಮೀನು ನೀಡಲು ಮುಂದಾಗಿದ್ದು, ಗ್ರಾಮದ ಹೊರವಲಯದ ಗೋಮಾಳ ಜಮೀನನ್ನು ನೀಡಲು ಠರಾವ್ ಪಾಸ್ ಮಾಡಿದೆ. ಹಲವು ವರ್ಷಗಳಿಂದ ಆಸ್ಪತ್ರೆಯಿಲ್ಲದೆ ಪರದಾಡುತ್ತಿದ್ದ ಈ ಗ್ರಾಮದ ಜನರಿಗೆ ಹೊಸದೊಂದು ಆಸೆ ಚಿಗುರಿದೆ.