ಚಾಮರಾಜನಗರ: ಕೊಳವೆ ಬಾವಿ, ತೆರೆದ ಬಾವಿಗಳಿಗೆ ಮಕ್ಕಳು ಬೀಳುತ್ತಿರುವ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿರುವುದು ಇನ್ನೂ ಹಸಿರಾಗಿದೆ. ಹೀಗಿರುವಾಗಲೇ ಮಹದೇಶ್ವರಬೆಟ್ಟದಲ್ಲಿರುವ ಕೀರನಹೊಲ ಅಂಗನವಾಡಿ ಹಿಂಭಾಗದಲ್ಲಿ ತೆರೆದ ಬಾವಿವೊಂದು ಬಾಯಿತೆರೆದು ನಿಂತಿರುವುದು ಅನಾಹುತಕ್ಕೆ ಎಡೆಮಾಡಿಕೊಟ್ಟಂತಿದೆ.
ಹಾಗೆ ನೋಡಿದರೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರವಾಸಿ ತಾಣ ಹಾಗೂ ಧಾರ್ಮಿಕ ಸ್ಥಳವಾಗಿರುವ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಕೀರನಹೊಲ ಪೋಡು ಸೇರುತ್ತಿದ್ದು, ಇಲ್ಲೊಂದು ಅಂಗನವಾಡಿಯಿದ್ದು, ಈ ಅಂಗನವಾಡಿ ಹಿಂಭಾಗವೇ ಹಳೆ ಕಾಲದ ತೆರೆದ ಬಾವಿಯಿದ್ದು ಇದರಲ್ಲಿ ನೀರಿದ್ದು ಇದರ ಮೇಲ್ಭಾಗವನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ದೊಡ್ಡದಾಗಿಯೇ ಇದ್ದು ಕಲ್ಲುಗಾರೆಯಿಂದ ಕಟ್ಟಲಾಗಿದೆ. ಆದರೆ ಸುತ್ತಲೂ ಕಾಂಪೌಂಡು ಕಟ್ಟದ ಕಾರಣ ನೆಲಕ್ಕೆ ಸಮವಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದಲ್ಲ. ಕೆಲವು ಮಕ್ಕಳು ಇಲ್ಲಿಗೆ ಬಂದು ಬಾವಿಯನ್ನು ಇಣುಕಿ ನೋಡುವ ಯತ್ನ ಮಾಡುತ್ತಿದ್ದು, ಇದೆಲ್ಲವನ್ನು ಹತ್ತಿರದಿಂದ ನೋಡಿದರೂ ಬಾವಿಗೆ ಮೇಲ್ಭಾಗವನ್ನು ಮುಚ್ಚುವ ಕಾರ್ಯಕ್ಕೆ ಗ್ರಾಪಂ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ