ನವದೆಹಲಿ: ಮಹತ್ವದ ಮತ್ತು ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಆರೋಗ್ಯದ ಕಾಳಜಿ ಮತ್ತು ವೈದ್ಯಕೀಯ ಸಲಹೆ ಮೇರೆಗೆ ಈ ತೀರ್ಮಾನ ಮಾಡಿದ್ದಾರೆ.
ಧನ್ಕರ್ ಅವರಿಗೆ ಈ ಹಿಂದೆ ಲಘು ಹೃದಯಾಘಾತ ಆಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಅವರು, “ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆ ಪಾಲಿಸಲು ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ವಿದಾಯ ಸಂದೇಶದಲ್ಲಿ, ಪ್ರಧಾನಿ ಮೋದಿ, ಸಚಿವ ಸಂಪುಟ, ಮತ್ತು ಸಂಸತ್ ಸದಸ್ಯರಿಗೆ ಧನ್ಯವಾದ ಹೇಳಿದ ಧನ್ಕರ್, ತಮ್ಮ ಅಧಿಕಾರಾವಧಿಯಲ್ಲಿ ಭಾರತೀಯ ಆರ್ಥಿಕ ಪ್ರಗತಿ ಹಾಗೂ ಸಾಧನೆಗಳನ್ನು ಕಾಣುವ ಅವಕಾಶವಿತ್ತದೆಂದು ಹೇಳಿದರು. ಇದರಿಂದ ಭಾರತದ ಎರಡನೇ ಅತಿ ಉನ್ನತ ಸಾಂವಿಧಾನಿಕ ಹುದ್ದೆ ಈಗ ಖಾಲಿಯಾಗಿದೆ. ಮುಂದಿನ ಉಪರಾಷ್ಟ್ರಪತಿ ಯಾರು ಎನ್ನುವುದು ಕುತೂಹಲ ಕೆರಳಿಸಿದೆ.

